ಬೆಂಗಳೂರು: ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದ ಕಾನ್ಸ್ಟೆಬಲ್ ಮೇಲೆ ಆರೋಪಿ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸಿರುವ ಘಟನೆ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರ್ತೂರು ಠಾಣೆಯ ಕಾನ್ಸ್ಟೆಬಲ್ ಮಂಜುನಾಥ್ ಹಲ್ಲೆಗೆ ಒಳಗಾದವರು.
ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ನವೀನ್ನನ್ನು ಬಂಧಿಸಲು ಮಂಜುನಾಥ್ ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಾತ್ರಿ ತೆರಳಿದ್ದರು. ಬಂಧಿಸಿ ಕರೆತರುವಾಗ ಪ್ರತಿರೋಧ ತೋರಿದ್ದನವೀನ್, ತಮ್ಮ ಮುರುಗೇಶ್ ಹಾಗೂ ತಾಯಿ ನರಸಮ್ಮ ದೊಣ್ಣೆಯಿಂದ ಹೊಡೆದಿದ್ದರು. ಬಳಿಕ ನವೀನ್ ಚಾಕುವಿನಿಂದ ಮಂಜುನಾಥ್ಗೆ ಇರಿದು ಪರಾರಿಯಾಗಿದ್ದ.
ಇರಿತದಿಂದ ಮಂಜುನಾಥ್ ಅವರ ಕುತ್ತಿಗೆ, ಕಿವಿ ಹಾಗೂ ತಲೆಗೆ ತೀವ್ರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿನರಸಮ್ಮ ಹಾಗೂ ಮುರುಗೇಶ್ನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ನವೀನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.