ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿಗೆ ಬಂದು ಭಾರಿ ಪ್ರಮಾಣದ ಗಾಂಜಾ ಮಾರಾಟ ಮಾಡುವ ಜಾಲದಲ್ಲಿ ಸಕ್ರಿಯರಾಗಿದ್ದ ಆಂಧ್ರಪ್ರದೇಶದ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಕಾಲಾಶಿವ ಜಮೇಲೆ (25), ಕಲ್ಲು ಗೋವಿಂದ (25) ಹಾಗೂ ಚಿತ್ತೂರು ಜಿಲ್ಲೆಯ ಹರಿಪ್ರಸಾದ್ (31) ಬಂಧಿತರು.
‘ಆರೋಪಿಗಳಿಂದ ₹21 ಲಕ್ಷ ಬೆಲೆಬಾಳುವ 70 ಕೆ.ಜಿ.ಗಾಂಜಾ ಹಾಗೂ ಒಂದು ಕೆ.ಜಿ. ವೀಡಾಯಿಲ್ (ಮಾದಕ ವಸ್ತು) ಅನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಕನಕಪುರ ಮುಖ್ಯರಸ್ತೆಯ ಜರಗನಹಳ್ಳಿ ಆಟದ ಮೈದಾನದ ಬಳಿ ಆರೋಪಿಗಳು ಗಾಂಜಾ ಮಾರುತ್ತಿದ್ದ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಆರೋಪಿಗಳ ವಿರುದ್ಧಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ (ಎನ್ಡಿಪಿಎಸ್) ಪ್ರಕರಣ ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.
‘ಮೋಜಿನ ಜೀವನ ನಡೆಸುವ ಉದ್ದೇಶದಿಂದ ಆರೋಪಿಗಳು ಮಾದಕ ವಸ್ತುಗಳ ಮಾರಾಟ ದಂಧೆಗೆ ಇಳಿದಿದ್ದರು.ಲಗೇಜ್ ಬ್ಯಾಗುಗಳಲ್ಲಿ ಗಾಂಜಾ ತುಂಬಿಕೊಂಡು ರೈಲು ಹಾಗೂ ಖಾಸಗಿ ವಾಹನಗಳ ಮೂಲಕ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ತರುತ್ತಿದ್ದರು. ನಗರದ ವಿವಿಧೆಡೆ ಅವುಗಳನ್ನು ಮಾರಾಟ ಮಾಡಿದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.