ADVERTISEMENT

ನಾಡ ಬಂದೂಕುಗಳು ಜಪ್ತಿ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 5:49 IST
Last Updated 15 ಜುಲೈ 2021, 5:49 IST

ಬೆಂಗಳೂರು: ಮಹಾರಾಷ್ಟ್ರದಿಂದ ಬಂದೂಕುಗಳನ್ನು ತಂದುನಗರದಲ್ಲಿ ಅಕ್ರಮವಾಗಿ ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಆರ್‌.ಕೆ.ಹೆಗಡೆ ನಗರದ ಫಯಾಜ್‌ ಉಲ್ಲಾ (32), ಮಹಮ್ಮದ್ ಅಲಿ (32) ಹಾಗೂ ಸೈಯದ್ ಸಿರಾಜ್ ಅಹ್ಮದ್ (42) ಬಂಧಿತರು.

‘ಆರೋಪಿಗಳು ಮಹಾರಾಷ್ಟ್ರದ ಶಿರಡಿ ಬಳಿಯ ಕೊಪ್ಪರ್‌ಗಾವ್ ಪ್ರದೇಶದಿಂದ ಬಂದೂಕುಗಳನ್ನು ತರುತ್ತಿದ್ದರು. ಶೋಕಿಗಾಗಿ ಹಾಗೂ ಆತ್ಮರಕ್ಷಣೆಗಾಗಿ ಬಂದೂಕುಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು. ಈ ವೇಳೆ ಅವರ ಬಳಿ ಇದ್ದ ಮೂರು ನಾಡ ಬಂದೂಕುಗಳು ಹಾಗೂ 24 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಫಯಾಜ್‌ ಉಲ್ಲಾ ಸಂಪಿಗೆಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ಮೇಲೆ ಆರು ಪ್ರಕರಣಗಳಿವೆ. ಈ ಹಿಂದೆಯೂ ಬಂದೂಕುಗಳನ್ನು ಹೊಂದಿದ್ದ ಆರೋಪ ಈತನ ಮೇಲಿತ್ತು. ಶಿವಾಜಿನಗರದ ರೌಡಿಶೀಟರ್ ಆಗಿರುವಮಹಮ್ಮದ್ ಅಲಿ ವಿರುದ್ಧ ನಾಲ್ಕು ಪ್ರಕರಣಗಳು ಹಾಗೂ ಸಿರಾಜ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.