ಬೆಂಗಳೂರು: ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಡಿ ಪ್ರಭು (37) ಎಂಬಾತನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ತಮಿಳುನಾಡು ವೆಲ್ಲೂರಿನ ಪ್ರಭು, ವೃತ್ತಿಯಲ್ಲಿ ಚಾಲಕ. ಚೀಲವೊಂದನ್ನು ಹಿಡಿದುಕೊಂಡು ಪೈಪ್ಲೈನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಸ್ಥಳೀಯರು ನೀಡಿದ್ದ ಮಾಹಿತಿಯಂತೆ ದಾಳಿ ಮಾಡಿ ಆತನನ್ನು ಸೆರೆ ಹಿಡಿಯಲಾಯಿತು’ ಎಂದು ಪೊಲೀಸರು ಹೇಳಿದರು.
‘ಆತನ ಬಳಿ ಮೂರು ಜಿಂಕೆಗಳ ಚರ್ಮ ಸಿಕ್ಕಿತು. ವೆಲ್ಲೂರಿಗೆ ಕರೆದೊಯ್ದು ಆತನ ಮನೆಯಲ್ಲೂ ತಪಾಸಣೆ ಮಾಡಲಾಯಿತು. ಅಲ್ಲಿ ಮೂರು ಕೊಂಬುಗಳು ಸಿಕ್ಕವು. ಅವೆಲ್ಲವನ್ನೂ ಜಪ್ತಿ ಮಾಡಲಾಗಿದೆ’ ಎಂದರು.
‘ಅರಣ್ಯ ಪ್ರದೇಶ ಸಮೀಪದಲ್ಲೇ ವಾಸವಿರುವ ವ್ಯಕ್ತಿಗಳು, ಜಿಂಕೆಯನ್ನು ಕೊಂದು ಮಾಂಸವನ್ನು ತಿಂದಿದ್ದಾರೆ. ಚರ್ಮ ಹಾಗೂ ಕೊಂಬುಗಳನ್ನು ನನಗೆ ನೀಡಿ ಮಾರಾಟ ಮಾಡುವಂತೆ ಹೇಳಿದ್ದರು. ಕಮಿಷನ್ ಆಸೆಯಿಂದ ಚರ್ಮವನ್ನು ಮಾರಲು ಬೆಂಗಳೂರಿಗೆ ಬಂದಿದ್ದೆ’ ಎಂಬುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲಿಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.