ಬೆಂಗಳೂರು: ಅಂಗಡಿಯೊಂದರಲ್ಲಿ ಲಕ್ಷಾಂತರಮೌಲ್ಯದ ರೇಷ್ಮೆ ಸೀರೆಗಳನ್ನು ಕದ್ದಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹12 ಲಕ್ಷ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಾಣವಾರದ ಸಂಧ್ಯಾನಗರ ನಿವಾಸಿ ರವಿಪ್ರಕಾಶ್ (62) ಬಂಧಿತ ಆರೋಪಿ.
ಇದೇ ತಿಂಗಳ 8ರಂದು ರಾತ್ರಿ ಯಶವಂತಪುರದ ವಿನೂತನ್ ಸಿಲ್ಕ್ಸ್ ಅಂಗಡಿಯ ಕಿಟಕಿ ಗ್ರಿಲ್ಗಳನ್ನು ಕತ್ತರಿಸಿ ಒಳಪ್ರವೇಶಿಸಿದ್ದ ಆರೋಪಿ, ಅಲ್ಲಿದ್ದ ರೇಷ್ಮೆ ಸೀರೆಗಳು ಹಾಗೂ ₹10 ಸಾವಿರ ನಗದು ಕದ್ದು ಆರೋಪಿ ಪರಾರಿಯಾಗಿದ್ದ. ಕಳ್ಳತನ ನಡೆದ ಮರುದಿನ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.
ಗೋವಾದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುಶ್ಚಟಗಳ ವ್ಯಸನದಿಂದ ಹೆಚ್ಚಿನ ಹಣಕ್ಕಾಗಿ ಅಲ್ಲಿನ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ 14 ಪ್ರಕರಣಗಳು ದಾಖಲಾಗಿ, ಜೈಲು ಶಿಕ್ಷೆ ಅನುಭವಿಸಿದ್ದ. ಬಳಿಕ ಬೆಂಗಳೂರಿಗೆ ಬಂದು ಆಟೊ ಓಡಿಸುತ್ತಿದ್ದ ಎನ್ನಲಾಗಿದೆ.
ಆರೋಪಿಯಿಂದ 67 ಸೀರೆಗಳು ಹಾಗೂ ಆಟೊ ವಶಕ್ಕೆ ಪಡೆದಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.