ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿ ಸಲೀಂ (28), ವಾಹನ ಪರಿಶೀಲನೆ ವೇಳೆಯಲ್ಲೇ ಕಾಮಾಕ್ಷಿಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
‘ಚಾಮರಾಜಪೇಟೆ ಟಿಪ್ಪುನಗರದ ಸಲೀಂ, ಹಲವು ತಿಂಗಳಿನಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಆತನಿಂದ ₹3.09 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಏಪ್ರಿಲ್ 4ರಂದು ಆರೋಪಿ ದ್ವಿಚಕ್ರ ವಾಹನದಲ್ಲಿ ಕೊಟ್ಟಿಗೆಪಾಳ್ಯ ಬಳಿ ತೆರಳುತ್ತಿದ್ದ. ಅದೇ ರಸ್ತೆಯಲ್ಲಿ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆರೋಪಿ ವಾಹನ ನಿಲ್ಲಿಸಿ ದಾಖಲೆ ಕೇಳಿದ್ದರು. ಆದರೆ, ಆತ ದಾಖಲೆ ನೀಡಿರಲಿಲ್ಲ. ವಾಹನ ಸಮೇತ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಕೃತ್ಯ ಬಾಯ್ಬಿಟ್ಟ.’ ‘ವಿಜಯನಗರ, ಮಾದನಾಯಕನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿ ವಾಹನಗಳನ್ನು ಕದ್ದಿರುವ ಮಾಹಿತಿ ಇದೆ’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.