ಬೆಂಗಳೂರು: ಸಾಮಾಜಿಕ ಜಾಲತಾಣ ಮೂಲಕ ವೈದ್ಯೆ ಸೋಗಿನಲ್ಲಿ ನಗರದ ನಿವಾಸಿ ಸೂರ್ಯಕಾಂತ್ ಎಂಬುವರನ್ನು ಪರಿಚಯಿಸಿಕೊಂಡಿದ್ದ ಮಹಿಳೆ, ಉಡುಗೊರೆ ಕಳುಹಿಸುವುದಾಗಿ ಹೇಳಿ ₹ 2 ಲಕ್ಷ ಪಡೆದು ವಂಚಿಸಿದ್ದಾರೆ.
ವಂಚನೆಗೀಡಾಗಿರುವ ಸೂರ್ಯಕಾಂತ್ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
‘ಖಾಸಗಿ ಕಂಪನಿ ಉದ್ಯೋಗಿ ಸೂರ್ಯಕಾಂತ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಪ್ರಿಸ್ಟಿಲ್ಲಾ ಎಂಬ ಮಹಿಳೆ ಪರಿಚಯ ಆಗಿತ್ತು. ತಾವು ಇಂಗ್ಲೆಂಡ್ನಲ್ಲಿ ವೈದ್ಯ ಆಗಿರುವುದಾಗಿ ಮಹಿಳೆ ಹೇಳಿದ್ದರು. ಬಡವರಿಗೆ ಕೊರೊನಾ ಸೋಂಕು ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಬೆಂಗಳೂರಿಗೆ ಬರುವುದಾಗಿಯೂ ತಿಳಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.
‘ನ. 11ರಂದು ಸೂರ್ಯಕಾಂತ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಿಮ್ಮ ಸ್ನೇಹಿತ ಪ್ರಿಸ್ಟಿಲ್ಲಾ ಇಂಗ್ಲೆಂಡ್ನಿಂದ ಬಂದಿದ್ದಾರೆ. ₹ 3 ಕೋಟಿ ಮೌಲ್ಯದ ವಸ್ತುಗಳ ಜೊತೆ ಸಿಕ್ಕಿಬಿದ್ದಿದ್ದಾರೆ. ತೆರಿಗೆ ಪಾವತಿಸಿದರೆ ಬಿಟ್ಟು ಕಳುಹಿಸುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ದೂರು
ದಾರ, ₹ 2 ಲಕ್ಷ ಸಂದಾಯ ಮಾಡಿದ್ದರು. ಅದಾದ ಬಳಿಕ ಮಹಿಳೆ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.