ADVERTISEMENT

ಸೈಬರ್‌ ವಂಚನೆ: ₹8.3 ಕೋಟಿ ಕಳೆದುಕೊಂಡ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 15:29 IST
Last Updated 15 ಡಿಸೆಂಬರ್ 2025, 15:29 IST
   

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ನಂಬಿಸಿ ಉದ್ಯಮಿಯಿಂದ ಸೈಬರ್‌ ವಂಚಕರು ₹8.3 ಕೋಟಿ ದೋಚಿದ್ದು, ಈ ಸಂಬಂಧ ಇಲ್ಲಿನ ದಕ್ಷಿಣ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ರಾಜೇಂದ್ರ ನಾಯ್ಡು ಅವರು ಹಣ ಕಳೆದುಕೊಂಡಿದ್ದಾರೆ.  

ರಾಜೇಂದ್ರ ನಾಯ್ಡು ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಿಂದೆ ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣವಾಗಿ ತೀರಿಸಿದ್ದರು. ಈ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದ ಸೈಬರ್ ವಂಚಕರು, ನಾಯ್ಡು ಅವರಿಗೆ ಕರೆ ಮಾಡಿ ‘ನಿಮ್ಮ ಸಿಬಿಲ್ ಸ್ಕೋರ್ ಉತ್ತಮ ಆಗಿದೆ’ ಎಂದು ನಂಬಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ವಂಚಕರ ಮಾತು ನಂಬಿದ್ದ ರಾಜೇಂದ್ರ ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರು. ಕೆಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದ ರಾಜೇಂದ್ರ ನಾಯ್ಡು ಅವರು ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅದರಿಂದ ಬರುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಬಹುದು ಎಂದು ಭಾವಿಸಿ ಹೂಡಿಕೆ ಮಾಡಲು ಇಚ್ಛಿಸಿದ್ದರು ಎಂದು ಮೂಲಗಳು ಹೇಳಿವೆ.

ದೂರುದಾರರಿಗೆ ಕರೆ ಮಾಡಿದ್ದ ವಂಚಕರು, ಫೋನ್‌ನಲ್ಲಿ ಆ್ಯಪ್‌ವೊಂದನ್ನು ಇನ್‌ಸ್ಟಾಲ್‌ ಮಾಡಿಸಿದ್ದರು. ಆ್ಯಪ್‌ ಮೂಲಕ ಆರಂಭದಲ್ಲಿ ₹25 ಲಕ್ಷ ಹೂಡಿಕೆ ಮಾಡಿದ್ದ ರಾಜೇಂದ್ರ ನಾಯ್ಡು ನಂತರ ಹಂತಹಂತವಾಗಿ ಒಟ್ಟು ₹8.3 ಕೋಟಿ ಹಣ ವರ್ಗಾಯಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಆ ಆ್ಯಪ್‌ನಲ್ಲಿ ₹59.4 ಕೋಟಿ ಲಾಭಾಂಶ ಬಂದಿರುವಂತೆ ತೋರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಲಾಭಾಂಶದಲ್ಲಿ ₹15 ಕೋಟಿ ವಾಪಸ್‌ ಪಡೆದುಕೊಳ್ಳಲು ದೂರುದಾರರು ಪ್ರಯತ್ನಿಸಿದಾಗ ಅದು ಸಾಧ್ಯವಾಗಿರಲಿಲ್ಲ. ವಂಚಕರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಶೇಕಡ 18ರಷ್ಟು ಸೇವಾ ಶುಲ್ಕವಾಗಿ ₹2.70 ಕೋಟಿ ಪಾವತಿಸಬೇಕು ಎಂದು ಬೇಡಿಕೆ ಇಟಿದ್ದರು. ಇದರಿಂದ ಅನುಮಾನಗೊಂಡ ರಾಜೇಂದ್ರ ಅವರು ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದರು ಎಂದು ಮೂಲಗಳು ಹೇಳಿವೆ.

₹60 ಲಕ್ಷ ಹಣ ವರ್ಗಾವಣೆಗೆ ತಡೆ

ವಂಚನೆಯಾದ ₹8.3 ಕೋಟಿ ಪೈಕಿ ವಂಚಕರ ಖಾತೆಯಲ್ಲಿದ್ದ ಸುಮಾರು ₹60 ಲಕ್ಷವನ್ನು ಫ್ರೀಜ್ (ಹಣ ವರ್ಗಾವಣೆಗೆ ತಡೆ) ಮಾಡಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಠಾಣೆಯ ಪೊಲೀಸರು ತಿಳಿಸಿದರು.

ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡವರು ಗಾಬರಿಗೊಂಡು ಸಮಯ ವ್ಯರ್ಥ ಮಾಡದೇ (ಒಂದು ಗಂಟೆಯ ಒಳಗಾಗಿ) ರಾಷ್ಟ್ರೀಯ ಸೈಬರ್ ಸಹಾಯವಾಣಿ (ಎನ್‌ಸಿಆರ್‌ಪಿ) 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು. ಸಮೀಪದ ಠಾಣೆಗೆ ತೆರಳಿ ತ್ವರಿತವಾಗಿ ದೂರು ದಾಖಲಿಸಬೇಕು. ತ್ವರಿತವಾಗಿ ದೂರು ದಾಖಲಿಸಿದರೆ ಹಣವು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗುವುದನ್ನು ತಡೆಯಬಹುದು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.