ಪ್ರಾತಿನಿಧಿಕ ಚಿತ್ರ
ದಾಬಸ್ ಪೇಟೆ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಿರುವ ಆರೋಪ ಮೇಲೆ ನೆಲಮಂಗಲ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೆಬಲ್ ಸೇರಿ ಒಂಬತ್ತು ಜನರ ವಿರುದ್ಧ ದಾಬಸ್ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಾಗರಬಾವಿಯ ಎನ್ಜಿಇಎಫ್ ಬಡಾವಣೆ ನಿವಾಸಿ ಥಾಂಪಿ ಮ್ಯಾಥ್ಯೂ ಅವರ ದೂರಿನ ಮೇರೆಗೆ ಕಾನ್ಸ್ಟೆಬಲ್ ಗಿರಿಜೇಶ್, ಮನೋಜ್, ರೋಹಿಣಿ ಕುಮಾರ್, ಥಾಂಪಿ ಮ್ಯಾಥ್ಯೂ ಹೆಸರಿನ ನಕಲಿ ವ್ಯಕ್ತಿ, ತರುಣ್, ಹಿರಿಯ ಉಪ ನೋಂದಣಾಧಿಕಾರಿ ಡಿ.ಪಿ.ಸತೀಶ್, ಪತ್ರ ಬರಹಗಾರ ವೆಂಕಟೇಶ್, ಸಾಕ್ಷಿಗಳಾದ ಹನುಮಂತು ಮತ್ತು ರಾಜು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
‘ನನ್ನ ಹೆಸರಿನಲ್ಲಿ ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಮಾಚನಹಳ್ಳಿ ಗ್ರಾಮದ ಸರ್ವೆ ನಂಬರ್ 56/5ರಲ್ಲಿ 5 ಎಕರೆ ಖರಾಬು ಹಾಗೂ ಕಂಬಾಳು ಗ್ರಾಮದ ಸರ್ವೆ ನಂಬರ್ 47ರಲ್ಲಿ 2 ಎಕರೆ 13 ಗುಂಟೆ ಮತ್ತು 1 ಎಕರೆ 7 ಗುಂಟೆ ಖರಾಬು ಜಮೀನು ಇದೆ. ಈ ಜಮೀನಿಗೆ ನಕಲಿ ಕಯಪತ್ರವನ್ನು ಸೃಷ್ಟಿಸಿ, ಕೆಐಎಡಿಬಿ ಭೂ ಪರಿಹಾರ ಪಡೆಯಲು ಆರೋಪಿಗಳು ಸಂಚು ರೂಪಿಸಿದ್ದಾರೆ’ ಎಂದು ಥಾಂಪಿ ಮ್ಯಾಥ್ಯೂ ದೂರು ನೀಡಿದ್ದಾರೆ.
‘ನಿವೃತ್ತಿ ಬಳಿಕ ಒಂದು ವರ್ಷದಿಂದ ವ್ಯವಸಾಯ ಮಾಡುತ್ತಿದ್ದೇನೆ. ಈ ಜಮೀನುಗಳನ್ನು ಸೀರಜ್ ಎಸ್ ಸಬರ್ವಾಲ್ ಅವರಿಂದ 2007ರಲ್ಲಿ ಶುದ್ಧ ಕ್ರಯಕ್ಕೆ ಖರೀದಿ ಮಾಡಿದ್ದು, ಕ್ರಯಪತ್ರವು ನೆಲಮಂಗಲ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. ಈ ಜಮೀನುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡಿದೆ. ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಪಹಣಿ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿದಾಗ, ಜಮೀನಿನ ಖಾತೆಯು ಮತ್ತೊಬ್ಬರ ಹೆಸರಿನಲ್ಲಿ ಬಂದಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.