ADVERTISEMENT

‘ಮಣ್ಣೆಯ ಸ್ಮಾರಕಗಳ ರಕ್ಷಣೆ ಆಗಲಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:30 IST
Last Updated 22 ನವೆಂಬರ್ 2020, 20:30 IST
ಪರಂಪರಾ ನಡಿಗೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು
ಪರಂಪರಾ ನಡಿಗೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು   

ದಾಬಸ‌್‌ಪೇಟೆ: ಗಂಗರ ರಾಜಧಾನಿಯಾಗಿದ್ದ ಮಣ್ಣೆ ಗ್ರಾಮದಲ್ಲಿ ಶನಿವಾರ ‘ಪರಂಪರಾ ನಡಿಗೆ’ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಈ ನಡಿಗೆ ಸೋಮೇಶ್ವರ ದೇವಾಲಯದಿಂದ, ಕಪಿಲೇಶ್ವರ ದೇವಾಲಯ, ಸಪ್ತ ಮಾತೃಕೆಯರ ವಿಗ್ರಹವಿರುವ ಸ್ಥಳ, ಅಣ್ಣತಂಗಿಯರ ಗುಡಿ, ವಿಜಯ ಜಿನಾಲಯ ಮಾರ್ಗವಾಗಿ ಮಣ್ಣೆ ಸರ್ಕಾರಿ ಪ್ರೌಢಶಾಲೆಯವರೆಗೆ ಸಾಗಿತು.

‘ಮಣ್ಣೆ ಗ್ರಾಮದಲ್ಲಿ ಗಂಗರ ಕಾಲದ ಸ್ಮಾರಕಗಳ ರಕ್ಷಣೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಗುರುತಿಸಿರುವ ಬೂದಿಗುಂಡಿಯಲ್ಲಿ ಶೀಘ್ರ ಉತ್ಖನನ ಕಾರ್ಯ ಪ್ರಾರಂಭಿಸಲಾಗುವುದು’ ಎಂದು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಾಯಕ ಪುರಾತತ್ವ ತಜ್ಞ ಡಾ. ಆರ್‌. ಎನ್. ಕುಮಾರನ್ ತಿಳಿಸಿದರು.

‘9ನೇ ಶತಮಾನದಿಂದ 12ನೇ ಶತಮಾನದ ಅವಧಿಯಲ್ಲಿ ಕನ್ನಡ ನಾಡಿನಲ್ಲಿ ಆಳ್ವಿಕೆ ಮಾಡಿದ ರಾಜ ವಂಶಗಳಲ್ಲಿ ಗಂಗರು ಪ್ರಮುಖರು. ಕೋಲಾರದಿಂದ ಮಣ್ಣೆಗೆ (ಮಾನ್ಯಪುರ) ತಮ್ಮ ರಾಜಧಾನಿಯನ್ನು ಬದಲಿಸಿಕೊಂಡು, ಒಂದಷ್ಟು ವರ್ಷ ಆಳ್ವಿಕೆ ಮಾಡಿ, ಇಲ್ಲಿಂದ ಮುಂದೆ ತಲಕಾಡನ್ನು ರಾಜಧಾನಿಯಾಗಿಸಿಕೊಂಡರು’ ಎಂದು ಇತಿಹಾಸ ತಜ್ಞ ಡಾ. ಎಚ್.ಎಸ್.ಗೋಪಾಲ್ ರಾವ್ ಹೇಳಿದರು.

ADVERTISEMENT

‘ಗಂಗರು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಆಳಿದ ಮಣ್ಣೆಯ ಅಭಿವೃದ್ಧಿ ಆಗಬೇಕು. ಇಲ್ಲಿನ ಸ್ಮಾರಕಗಳು ರಕ್ಷಣೆಯಾಗಬೇಕು. ಇದಕ್ಕೆ ಪುರಾತತ್ವ ಇಲಾಖೆ ಹಾಗೂ ಸರ್ಕಾರ ಮುಂದಾಗಬೇಕು’ ಎಂದು ವಕೀಲ ವೆಂಕಟೇಶ್ ದೊಡ್ಡೇರಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.