
‘ಕರಾವಳಿ ರತ್ನ’ ಪ್ರಶಸ್ತಿಯನ್ನು ಕುವೈತ್ ಉದ್ಯಮಿ ನಕ್ರೆ ಸತೀಶಚಂದ್ರ ಶೆಟ್ಟಿ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ, ಸೌಂದರ್ಯ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಟ್ ಬೆಂಗಳೂರು ಅಧ್ಯಕ್ಷ ಸೌಂದರ್ಯಮಂಜಪ್ಪ, ಉದ್ಯಮಿ ಎಲಿಯಾಸ್ ಸಾಂಕ್ಟಿಸ್ ಅವರಿಗೆ ಪ್ರದಾನ ಮಾಡಲಾಯಿತು
ಪ್ರಜಾವಾಣಿ ಚಿತ್ರ - ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ‘ಕಿಡಿಗೇಡಿಗಳು ಎಲ್ಲಾ ಧರ್ಮದಲ್ಲಿದ್ದರೂ ಸಹಬಾಳ್ವೆ, ದಾನದ ವಿಚಾರದಲ್ಲಿ ದಕ್ಷಿಣ ಕನ್ನಡ ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ಬಾರ್ಕೂರು ಸಂಸ್ಥಾನದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಹೇಳಿದರು.
ದಕ್ಷಿಣ ಕನ್ನಡಿಗರ ಸಂಘ ಶನಿವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಿಮ್ಮನ್ನು ನೀವು ಮೊದಲು ಪ್ರೀತಿಸಿ, ನಿಮ್ಮ ಹೃದಯವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಎಲ್ಲಾ ಧರ್ಮಗಳು ಹೇಳುತ್ತವೆ. ಆದರೆ ಕುರಾನ್ ಹಾಗೂ ಭಗವದ್ಗೀತೆಯನ್ನು ಓದದವರೂ ಕೆಲವೊಮ್ಮೆ ಶಾಂತಿ ಸಂದೇಶ ನೀಡುವುದೂ ಉಂಟು. ಮಚ್ಚು ಹಿಡಿದು ಫೋಟೊ ಹಾಕಿಸಿಕೊಂಡು ಯಾವುದೇ ಧರ್ಮ ಬೆಂಬಲಿಸಿ ಎಂದು ಹೇಳುವವರನ್ನು ಬೆಂಬಲಿಸುವುದು ಕ್ರೂರತೆ ಬೆಂಬಲಿಸಿದ ಹಾಗೆ’ ಎಂದು ಹೇಳಿದರು.
‘ಧರ್ಮ, ಜಾತಿ ಎನ್ನುವುದಕ್ಕಿಂತ ಮಾನವ ಸೇವೆಯೇ ದೊಡ್ಡದು. ಇಂತಹ ಮಾದರಿಯನ್ನು ದಕ್ಷಿಣ ಕನ್ನಡ ತೋರಿಸಿದೆ. ತುಳು ಭಾಷೆ ಕನ್ನಡಕ್ಕಿಂತ ಪುರಾತನವಾದದ್ದು ಎನ್ನುವುದನ್ನು ಸಂಶೋಧನೆಗಳೇ ಹೇಳಿವೆ. ಅದೇ ರೀತಿ ಯಕ್ಷಗಾನದಿಂದ ಜನರ ನಡೆ, ನುಡಿ, ಸಂಸ್ಕೃತಿಯಲ್ಲೂ ಬದಲಾವಣೆಯಾಗಿ ಕರಾವಳಿಯವರಿಗೆ ಗೌರವವೂ ದೊರೆತಿದೆ’ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ‘ದಕ್ಷಿಣ ಕನ್ನಡದವರು ಸಿನಿಮಾ, ಕಲೆ, ಸಂಗೀತ, ಬ್ಯಾಂಕಿಂಗ್, ಉದ್ಯಮ ಸಹಿತ ಹಲವು ಕ್ಷೇತ್ರಗಳಲ್ಲಿ ಗಟ್ಟಿಯಾಗಿ ಗುರುತಿಸಿಕೊಂಡವರು. ಯಕ್ಷಗಾನದಿಂದಲೂ ಈ ಭಾಗಕ್ಕೆ ಗೌರವ ಬಂದಿದೆ. ಹೊಸ ತಲೆಮಾರಿನವರು ಈ ಹಿರಿಮೆಯನ್ನು ಮುಂದುವರೆಸಿಕೊಂಡು ಹೋಗಬೇಕು’ ಎಂದು ಹೇಳಿದರು.
ನಾಲ್ವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ ಡಾ.ಕೆ.ಪಿ.ಪುತ್ತೂರಾಯ ಅವರಿಂದ ವಿನೋದ ವಿಚಾರ ಕಾರ್ಯಕ್ರಮ ನಡೆಯಿತು.
ಸಂಘಕ್ಕೆ ಉಚಿತ ಜಾಗ
ದಕ್ಷಿಣ ಕನ್ನಡಿಗರ ಸಂಘಕ್ಕೆ ಬೆಂಗಳೂರಿನಲ್ಲಿ ಸ್ವಂತ ಕಟ್ಟಡ ನಿರ್ಮಿಸಲು 10 ಸಾವಿರ ಚದರಡಿ ಜಾಗವನ್ನು ಉಚಿತವಾಗಿ ನೀಡುವುದಾಗಿ ಉದ್ಯಮಿ ಸಯ್ಯದ್ ಮೊಹಮ್ಮದ್ ಬ್ಯಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.