ಬೆಂಗಳೂರು: ‘ದಲಿತರು ಹಾಗೂ ಮಹಿಳೆಯರನ್ನು ಮೇಲೆತ್ತುವ ಕಾರ್ಯ ದೇಶದಲ್ಲಿ ನಡೆಯುತ್ತಿಲ್ಲ. ಮಹಮ್ಮದ್ ಪೈಗಂಬರ್ ಆದರ್ಶ, ಮಾರ್ಗದರ್ಶನದಲ್ಲಿ ನಡೆದರೆ ಬದಲಾವಣೆ ಸಾಧ್ಯ’ ಎಂದು ಕರ್ನಾಟಕ ಸದ್ಭಾವನಾ ವೇದಿಕೆಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಆಯೋಜಿಸಿದ್ದ ಪ್ರವಾಸಿ ಮುಹಮ್ಮದ್ (ಸ)ರ ಮಾನವೀಯ ಶಿಕ್ಷಣಗಳು- ಪ್ರಸ್ತುತತೆ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪೈಗಂಬರ್ ಎಲ್ಲಾ ಕಾಲಕ್ಕೂ ಅನ್ವಯಿಸುವ ಮೌಲ್ಯಗಳನ್ನು ನೀಡಿದ್ದಾರೆ. ಇಂದು ಅನ್ಯಾಯ, ದೌರ್ಜನ್ಯ, ಕೋಮುವಾದಿ, ಅತ್ಯಾಚಾರ, ಭ್ರಷ್ಟಾ
ಚಾರ ಸೇರಿದಂತೆ ಬಡವರ ಹಾಗೂ ದುರ್ಬಲರ ಶೋಷಣೆ ಹೆಚ್ಚಾಗಿದೆ. ಇದರಿಂದ ಮಾನವೀಯತೆ ವಿನಾಶದ ಅಂಚಿನಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹನುಮಂತನನ್ನು ದಲಿತ ಎಂದಿದ್ದರು. ಅವರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ದೇವರನ್ನು ದಲಿತ ಎಂಬುದಾಗಿ ಕರೆದು ಅವಮಾನ ಮಾಡಿದ್ದಾರೆ ಎಂದು ಬ್ರಾಹ್ಮಣ ಸಮುದಾಯ ಈ ಆರೋಪ ಖಂಡಿಸಿ, ನ್ಯಾಯಾಲಯದ ಮೆಟ್ಟಿಲೇರಿದೆ. ದಲಿತ ಎಂಬುದಕ್ಕಾಗಿ ಆಂದೋಲನ ನಡೆಸಿದರೆ, ಆ ಸ್ಥಿತಿಯಲ್ಲೇ ಬದುಕುತ್ತಿರುವ ಅವರ ಪಾಡು ಹೇಗಿರಬೇಡ. ಇದು ಮೇಲು–ಕೀಳು, ಮಡಿ–ಮೈಲಿಗೆಯ ಪ್ರಶ್ನೆ’ ಎಂದರು.
ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವಗೌಡ, ‘ಇಂದು ಧರ್ಮ– ಧರ್ಮಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿ ಆಗುತ್ತಿದೆ. ಸಾಮರಸ್ಯ, ಸೌಹಾರ್ದ ಕ್ಷೀಣಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.