ಹೆಸರಘಟ್ಟ: ಯಶವಂತಪುರ ಎ.ಪಿ.ಎಂ.ಸಿ.ಯು ದಾಸನಪುರ ಗ್ರಾಮಕ್ಕೆ ಸ್ಥಳಾಂತರವಾಗಿದ್ದು ವ್ಯಾಪಾರದಲ್ಲಿ ವಹಿವಾಟು ಹೆಚ್ಚಿನ ಬೇಡಿಕೆಯನ್ನು ಕುದುರಿರುವುದರಿಂದ ವರ್ತಕರಲ್ಲಿ ಸಂತಸ ಮೂಡಿದೆ.
ಕೋವಿಡ್ ಕಾರಣ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಗ ಈರುಳ್ಳಿ, ಆಲೂಗಡ್ಡೆಯ ಸಗಟು ವ್ಯಾಪಾರವನ್ನು ಒಂದು ತಿಂಗಳ ಹಿಂದೆ ಸ್ಥಳಾಂತರ ಮಾಡಲಾಗಿತ್ತು. 212 ಮಳಿಗೆಗಳ ಪೈಕಿ ಸುಮಾರು 150 ಮಳಿಗೆಗಳಲ್ಲಿ ವರ್ತಕರು ವ್ಯಾಪಾರವನ್ನು ಪ್ರಾರಂಭಿಸಿದರು. ಪ್ರತಿ ದಿನ ಸುಮಾರು ನೂರಕ್ಕೂ ಹೆಚ್ಚು ಲಾರಿಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಂದ ರೈತರು ವ್ಯಾಪಾರದಲ್ಲಿ ತೊಡಗಿದ ಪರಿಣಾಮ ಭರ್ಜರಿ ವಹಿವಾಟು ನಡೆಯುತ್ತಿದೆ.
‘ಹೊಸಪೇಟೆ, ಚಿತ್ರದುರ್ಗ, ಬಳ್ಳಾರಿ ಭಾಗಗಳಿಂದ ಬರುವ ರೈತರಿಗೆ ದಾಸನಪುರ ಎಪಿಎಂಸಿಯಿಂದ ಹೆಚ್ಚು ಅನುಕೂಲವಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಲಾರಿಯಿಂದ ತರುವ ರೈತರು ದಿನಗಟ್ಟಲೇ ಕಾಯಬೇಕಿಲ್ಲ. ಒಂದು ದಿನದೊಳಗೆ ತಾವು ತಂದ ಪದಾರ್ಥವನ್ನು ರೈತರು ವರ್ತಕರಿಗೆ ಕೊಟ್ಟು ವಾಪಸ್ಸು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ’ ಎಂದು ವರ್ತಕರಾದ ಮಹೇಶ್ ತಿಳಿಸಿದರು.
‘ಹೊರ ಜಿಲ್ಲೆಗಳಿಂದ ಬರುವ ರೈತರಿಗೆ ಇಲ್ಲಿ ಮೂಲಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ ಬಿಕ್ಕಟ್ಟು ಮುಗಿಯುವ ತನಕ ಇಲ್ಲಿಯೇ ವ್ಯಾಪಾರ ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ವರ್ತಕರ ಸಂಘದ ಅಧ್ಯಕ್ಷ ಬಿ.ಅರ್.ಶ್ರೀರಾಮ ರೆಡ್ಡಿ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.