ಬೆಂಗಳೂರು: ಪಾದರಾಯನಪುರದಲ್ಲಿ ಗಲಭೆ ನಡೆಸಿದವರ ಪೈಕಿ ಐವರಲ್ಲಿ ಕೋವಿಡ್-19 ದೃಢಪಟ್ಟಿದೆ, ಅವರೆಲ್ಲರನ್ಬೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
'ಎಲ್ಲರನ್ನೂ ತಪಾಸಣೆ ಮಾಡಿಯೇ ರಾಮನಗರ ಜೈಲಿಗೆ ರವಾನಿಸಲಾಗಿತ್ತು. ಗುರುವಾರ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೆ, ಶುಕ್ರವಾರ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ' ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಹಸಿರು ವಲಯ ರಾಮನಗರವನ್ನು ಕೆಂಪು ವಲಯ ಮಾಡುವ ದುರುದ್ದೇಶ ಇರಲಿಲ್ಲ. ಅಲ್ಲಿನ ಜನಪ್ರತಿನಿಧಿಗಳ ಮೇಲಿನ ದ್ವೇಷದಿಂದ ಹೀಗೆ ಮಾಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದೊಡ್ಡ ಸಂಖ್ಯೆಯ ಕೈದಿಗಳು ಇರುವುದರಿಂದ ಸಮೀಪದ ರಾಮನಗರ ಜೈಲಿಗೆ ಸಾಗಿಸುವ ನಿರ್ಧಾರಕ್ಕೆ ಬರಲಾಗಿತ್ತು' ಎಂದರು.
ಪಾದರಾಯನಪುರದಲ್ಲಿ ಶುಕ್ರವಾರ ಮತ್ತೆ ಮೂವರಿಗೆ ಸೋಂಕು: ರಾಮುಲು ಟ್ವೀಟ್
ಪಾದರಾಯನಪುರದಲ್ಲಿ ಕೊರೊನಾ ಸೈನಿಕರ ವಿರುದ್ಧ ಹಲ್ಲೆ ಮಾಡಿದ ಆರೋಪಿಗಳಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇಬ್ಬರಿಗೆ ಈ ಮೊದಲು ಕೊರೊನಾ ಸೋಂಕು ಖಚಿತವಾಗಿತ್ತು. ಮತ್ತೆ ಮೂವರಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಒಟ್ಟು ಐದು ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.