ಪ್ರಾತಿನಿದಿಕ ಚಿತ್ರ
ಬೆಂಗಳೂರು: ಬಸ್ ಆ್ಯಂಡ್ ಕಾರ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾ (ಬಿಒಸಿಐ) ಇದೇ 29 ರಿಂದ 31ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸುತ್ತಿರುವ ‘ಪ್ರವಾಸ್ 4.0’ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ತಿಳಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ‘ಪ್ರವಾಸ್ 4.0 ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಣಕಾಸು ನಿರ್ವಹಣೆಯಲ್ಲಿ ಅಕ್ರಮ ನಡೆಯುತ್ತಿದೆ. ಹಿಂದಿನ ಮೂರು ‘ಪ್ರವಾಸ್’ ಕಾರ್ಯಕ್ರಮಗಳ ಕುರಿತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಯನ್ನು ಸದಸ್ಯರಿಗೆ ನೀಡುತ್ತಿಲ್ಲ. ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್ ಡಿವೈಸಸ್ ಮತ್ತು ಪ್ಯಾನಿಕ್ ಬಟನ್ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಆದ್ದರಿಂದ, ಈ ಬಾರಿಯ ‘ಪ್ರವಾಸ್’ ಬಹಿಷ್ಕರಿಸಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.
‘ಅಗ್ರಿಗೇಟರ್ ಕಂಪನಿಗಳು ವಾಹನಗಳ ಮಾಲೀಕರ ಕಮಿಷನ್ ಮೊತ್ತದಲ್ಲಿ ಶೇಕಡ 12 ರಿಂದ 20ರಷ್ಟನ್ನು ಸುಲಿಗೆ ಮಾಡುತ್ತಿವೆ. ಈ ಅಗ್ರಿಗೇಟರ್ ಕಂಪನಿಗಳಿಂದಲೇ ಈ ಬಾರಿಯ ‘ಪ್ರವಾಸ್’ ಪ್ರದರ್ಶನದಲ್ಲಿ ಜಾಹೀರಾತು ಪಡೆದುಕೊಳ್ಳಲಾಗುತ್ತಿದೆ. ಆದ್ದರಿಂದ ಈ ಕಂಪನಿಗಳ ವಿರುದ್ಧ ಬಿಒಸಿಐ ಧ್ವನಿ ಎತ್ತುತ್ತಿಲ್ಲ’ ಎಂದು ದೂರಿದರು.
‘ವಿವಿಧ ರಾಜ್ಯಗಳ ಸಂಘಟನೆಗಳನ್ನು ಒಳಗೊಂಡು ಬಿಒಸಿಐ ಎಂಬ ಒಕ್ಕೂಟ ರಚಿಸಲಾಗಿದೆ. ಆದರೆ, ಬಿಒಸಿಐ ಒಕ್ಕೂಟದ ಮೂಲ ತತ್ವಗಳ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಪಾರದರ್ಶಕತೆ ಕೊರತೆ ಇದೆ. ರಾಜ್ಯ ಸಂಘಟನೆಗಳು ಬಿಒಸಿಐ ಪ್ರಮುಖರನ್ನು ಪ್ರಶ್ನಿಸಿದರೆ, ಸಮಪರ್ಕ ಉತ್ತರ ನೀಡುತ್ತಿಲ್ಲ. ಬೈಲಾ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಆರೋಪಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ರಾಘು, ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.