ಬೆಂಗಳೂರು: ರಸಗೊಬ್ಬರಕ್ಕೆ ನೀಡುವ ಸಹಾಯ ಧನವನ್ನು ನೇರವಾಗಿ ರೈತರಿಗೆ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
ಕೇಂದ್ರ ಸರ್ಕಾರ ರಸಗೊಬ್ಬರ ಸಹಾಯಧನವನ್ನು ಹೆಚ್ಚಿಸಲು ಮುಂದಾಗಿದೆ. ಇದರಿಂದಾಗಿ ದೇಶಕ್ಕೆ ಮತ್ತಷ್ಟು ಹೊರೆಯಾಗಲಿದೆ ಹಾಗೂ ರಸಾಯನಿಕ ಕಂಪನಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ರಾಜು ದೂರಿದ್ದಾರೆ.
ಒಂದು ಎಕರೆ ಕಬ್ಬು ಬೆಳೆಗೆ ಕನಿಷ್ಠ 20 ಚೀಲ ರಸಗೊಬ್ಬರ ಬಳಸಲಾಗುತ್ತಿದೆ. ಅಂದರೆ, 20 ಚೀಲಕ್ಕೆ ಸರಾಸರಿ ₹40 ಸಾವಿರದಿಂದ ₹50 ಸಾವಿರ ರೈತರ ಹೆಸರಿನಲ್ಲಿ ಕಂಪನಿಗಳ ಪಾಲಾಗುತ್ತಿದೆ. ಇದರ ಬದಲು ರಸಗೊಬ್ಬರವನ್ನು ಮುಕ್ತ ಮಾರುಕಟ್ಟೆಯಲ್ಲಿ ವಿತರಿಸಿ ಸಹಾಯಧನವನ್ನು ರೈತರಿಗೆ ನೇರವಾಗಿ ಕೃಷಿ ಉತ್ಪನ್ನಗಳ ಮಾನದಂಡದ ಆಧಾರದ ಮೇಲೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ರೀತಿಯ ಕ್ರಮಗಳಿಂದ ದುಬಾರಿ ರಸಗೊಬ್ಬರ ಬದಲಾಗಿ ನೈಸರ್ಗಿಕ ಕೃಷಿಯತ್ತ ರೈತರು ಒಲವು ತೋರುತ್ತಾರೆ. ಆಗ ಸಮಾಜಕ್ಕೂ ವಿಷಮುಕ್ತ ಆಹಾರ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.