ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಐದು ದಿನಗಳ ಹಿಂದೆ (ನ. 27ರಂದು)ದಕ್ಷಿಣ ಆಫ್ರಿಕಾದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಪೈಕಿ ಇಬ್ಬರಲ್ಲಿಡೆಲ್ಟಾ ಪ್ಲಸ್ ಸೋಂಕು
ದೃಢಪಟ್ಟಿದೆ.
ಕೊರೊನಾ ಸೋಂಕು ವ್ಯಾಪಿಸಿರುವ ಅಪಾಯಕಾರಿ ರಾಷ್ಟ್ರಗಳಿಂದ (ಹೈ ರಿಸ್ಕ್) ಬಂದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿದಾಗ ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇಬ್ಬರ ಗಂಟಲು ದ್ರವ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
‘ಇಬ್ಬರ ವರದಿ ಬಂದಿದ್ದು, ಡೆಲ್ಟಾ ಪ್ಲಸ್ ಖಚಿತವಾಗಿದೆ. ಈಗಾಗಲೇ ಈ ಇಬ್ಬರನ್ನೂ ಬಿಬಿಎಂಪಿ ವಶಕ್ಕೆ ಒಪ್ಪಿಸಲಾಗಿದೆ.ವಿಮಾನ ನಿಲ್ದಾಣದಲ್ಲಿನವೆಂಬರ್ ತಿಂಗಳಲ್ಲಿ ನಡೆದ ತಪಾಸಣೆ ವೇಳೆ ವಿದೇಶಗಳಿಂದ ಬಂದ ಒಟ್ಟು ಐವರು ಪ್ರಯಾಣಿಕರಲ್ಲಿ ಕೋವಿಡ್-19 ದೃಢಪಟ್ಟಿದೆ’ ಎಂದು ಬೆಂಗಳೂರು ಗ್ರಾಮಾಂತರಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
‘ಡಿ.1ರಿಂದ ಪ್ರಯಾಣಿಕರಿಗೆ ಆರ್ಟಿ–ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಎರಡು ದಿನದಲ್ಲಿ 1,436 ಪ್ರಯಾಣಿಕರು ಬಂದಿದ್ದಾರೆ.
ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿ ನೆಗೆಟಿವ್ ಬಂದಿರುವ ಕಾರಣ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಎಲ್ಲರ ಮೇಲೂ ನಿಗಾ ಇಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಓಮೈಕ್ರಾನ್ ಸೋಂಕಿತರು ಕಂಡುಬಂದಿಲ್ಲ. ಓಮೈಕ್ರಾನ್ ಸೋಂಕಿತರ ಬಗ್ಗೆ ನಮಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲ.
- ಕೆ.ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.