ಬೆಂಗಳೂರು: ಲಿಂಗೈಕ್ಯ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ 'ಭಾರತ ರತ್ನ' ನೀಡುವಂತೆ ಆಗ್ರಹಿಸಿ ಪುರಭವನದ ಮುಂಭಾಗ ‘ರಾಷ್ಟ್ರೀಯ ಬಸವಧರ್ಮ ಪೀಠ’ದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
‘ಜಾತಿ, ಮತ, ಧರ್ಮ, ಪಂಗಡ ಎಂಬುದನ್ನು ಭೇದಭಾವ ತೋರಿಸದೆ ಸ್ವಾಮೀಜಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಎಲ್ಲರನ್ನೂ ಭಕ್ತರೆಂದು ಪರಿಗಣಿಸಿ ನಿತ್ಯ ಅಕ್ಷರ, ಅನ್ನ ದಾಸೋಹ ಮಾಡುತ್ತಿದ್ದ ಶ್ರೀಗಳಿಗೆ ಭಾರತರತ್ನ ನೀಡದೆಕೇಂದ್ರ ಸರ್ಕಾರವು ಅನ್ಯಾಯ ಮಾಡಿದೆ’ ಎಂದು ದೂರಿದರು.
‘ಶ್ರೀಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಕೊಡುವಂತೆ ಪ್ರಧಾನಿ ಮೋದಿ ಅವರ ಮೇಲೆ ಎಲ್ಲ ಪಕ್ಷಗಳ ಮುಖಂಡರು ಒತ್ತಡ ಹಾಕಬೇಕು’ ಎಂದುಪೀಠದ ಪ್ರಧಾನ ಕಾರ್ಯದರ್ಶಿ ಬಸವಕುಮಾರ ಸ್ವಾಮೀಜಿ ಮನವಿ ಮಾಡಿದರು.
ಶ್ರೀಗಳ ಪುಣ್ಯತಿಥಿ ಜ.31ರಂದು ಜರುಗಲಿದೆ. ಅಂದು ಕೇಶ ಮುಂಡನೆ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ. ಇದು ದುಃಖಕರ ಸಂಗತಿ. ಅದೊಂದು ವೈದಿಕ ಧಾರ್ಮಿಕ ಸಂಪ್ರದಾಯ ಪದ್ಧತಿ. ಅದನ್ನು ಅನುಸರಿಸಬಾರದು. ಸಿದ್ಧಲಿಂಗ ಸ್ವಾಮಿ ಅವರು ಈ ಕಾರ್ಯಕ್ಕೆ ತಡೆ ಹಾಕಬೇಕು. ಅದರ ಬದಲಿಗೆ ಶ್ರೀಗಳ ಹೆಸರಿನಲ್ಲಿ ಪ್ರವಚನ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.
‘ಲೋಕಸಭೆ ಚುನಾವಣೆಯೊಳಗೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.