ADVERTISEMENT

₹20 ಸಾವಿರ ಕೋಟಿ ಪ್ಯಾಕೇಜ್‌ಗೆ ಜನಾಗ್ರಹ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 22:36 IST
Last Updated 7 ಜೂನ್ 2021, 22:36 IST

ಬೆಂಗಳೂರು: ‘ಜನರ ಜೀವ ಹಾಗೂ ಜೀವನ ಉಳಿಸಲು ಸರ್ಕಾರವು ಕನಿಷ್ಠ ₹20 ಸಾವಿರ ಕೋಟಿ ಮೊತ್ತದ ಸಮಗ್ರ ಪ್ಯಾಕೇಜ್‌ ಪ್ರಕಟಿಸುವ ಜತೆಗೆ ಕೋವಿಡ್‌ ಅನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಬೇಕು’ ಎಂದು ಜನಾಗ್ರಹ ಆಂದೋಲನವು ಪತ್ರದ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.

ಜನಾಗ್ರಹದ ಪರವಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿಕಾಂತ್ ಸೆಂಥಿಲ್‌, ಮಾವಳ್ಳಿ ಶಂಕರ್‌, ಎಚ್‌.ಆರ್. ಬಸವರಾಜಪ್ಪ, ಸ್ವರ್ಣಾ ಭಟ್‌, ನೂರ್ ಶ್ರೀಧರ್‌, ಕೆ.ಎಲ್. ಅಶೋಕ್‌ ಮೊದಲಾದವರು, ಈ ಆಗ್ರಹ ಪತ್ರಕ್ಕೆ ರಾಜ್ಯದ 650ಕ್ಕೂ ಹೆಚ್ಚು ಗಣ್ಯರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಹಿ ಮಾಡಿದ್ದಾರೆ ಎಂದರು.

ಬೇಡಿಕೆಗಳೇನು?: ‘ಸರ್ಕಾರವು ಎರಡನೇ ಅಲೆ ಎದುರಿಸಲು ಯಾವ ಸಿದ್ಧತೆಗಳನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ಅಪಾರ ಸಾವು ನೋವುಗಳು ಸಂಭವಿಸಿದವು. ನಂತರ ಲಾಕ್‌ಡೌನ್‌ ಹೇರಿ ಜನರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತು. ತನ್ನ ವೈಫಲ್ಯ ಮರೆಮಾಚಲು ಅರೆ ಬರೆ ಪ್ಯಾಕೇಜ್‌ ಘೋಷಿಸಿತು. ಈಗ ಸಮಸ್ಯೆಯನ್ನು ಅರಿತು ಹಾಗೂ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಲು ಸರ್ಕಾರ ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲೇಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ಲಾಕ್‌ಡೌನ್‌ ತೆರವಾದ ಮರುದಿನವೇ ಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲಾ ಶಾಸಕರ ಮನೆ ಹಾಗೂ ಕಚೇರಿಗಳ ಮುಂದೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿಯೂ ಪತ್ರದಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.