ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿದಾರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂದು 2006 ಪೂರ್ವದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ಆಗ್ರಹಿಸಿದೆ.
‘2006ಕ್ಕಿಂತ ಮೊದಲು ನೇಮಕಗೊಂಡಿರುವ ಬೋಧಕ, ಬೋಧಕೇತರ ನೌಕರರನ್ನು ಅವರ ನೇಮಕಕ್ಕೆ ಅನ್ವಯವಾಗಿ ಹಳೆ ಪಿಂಚಣಿಗೆ ಸೇರಿಸಬೇಕು. ನಮ್ಮ ನೇಮಕ ಸರ್ಕಾರದ ನಿಯಮಾನುಸಾರ ಆಗಿರುವುದರಿಂದ ಹೊಸ ಪಿಂಚಣಿ ಯೋಜನೆ ನಮಗೆ ಅನ್ವಯವಾಗುವುದಿಲ್ಲ. ಕಾಲ್ಪನಿಕ ವೇತನದ ಸಮಸ್ಯೆ, ಹೊಸ ಪಿಂಚಣಿ ಯೋಜನೆಯ ಕೊಡುಗೆ ಹಣ ಅನ್ವಯವಾಗುವುದಿಲ್ಲ. 2014ರ ಮಸೂದೆ ಅನ್ವಯವಾಗುವುದಿಲ್ಲ’ ಎಂದು ವೇದಿಕೆ ತಿಳಿಸಿದೆ.
‘ಸರ್ಕಾರಿ ನೌಕರರಿಗೆ ಆದೇಶ ಮಾಡಿದ ರೀತಿಯಲ್ಲಿ ನಮಗೂ ಆದೇಶ ಮಾಡಿ ಹಳೆ ಪಿಂಚಣಿ ಒದಗಿಸಬೇಕು. ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ಶಿಕ್ಷಕ ಕಲ್ಯಾಣ ನಿಧಿ ಸ್ಥಾಪಿಸಬೇಕು. ನಿವೃತ್ತರಾದ ಮೇಲೆ ಸಂಧ್ಯಾಕಾಲದ ಜೀವನ ನಡೆಸಲು ನಿರ್ದಿಷ್ಟ ಧನ ಸಹಾಯ ನೀಡಬೇಕು’ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಜಿ.ಆರ್. ಹೆಬ್ಬೂರು, ಪದಾಧಿಕಾರಿಗಳಾದ ಗ.ಪು. ನಾಗೇಶ, ಜಿ.ಪಿ. ನಾಗರಾಜ, ಸಿ.ಡಿ. ರವಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.