ADVERTISEMENT

ಸಿಎಂಗೆ ಪತ್ರ ಬರೆದರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ: ಶಾಸಕ ಎಸ್. ಮುನಿರಾಜು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:20 IST
Last Updated 26 ಮಾರ್ಚ್ 2024, 15:20 IST
ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಿಎಂ ಮತ್ತು ಡಿಸಿಎಂ ಅವರಿಗೆ ಬರೆದಿದ್ದ ಮನವಿ ಪತ್ರಗಳನ್ನು ಶಾಸಕ ಎಸ್ ಮುನಿರಾಜು ಅವರು ಪ್ರದರ್ಶಿಸಿದರು.
ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಿಎಂ ಮತ್ತು ಡಿಸಿಎಂ ಅವರಿಗೆ ಬರೆದಿದ್ದ ಮನವಿ ಪತ್ರಗಳನ್ನು ಶಾಸಕ ಎಸ್ ಮುನಿರಾಜು ಅವರು ಪ್ರದರ್ಶಿಸಿದರು.   

ಪೀಣ್ಯ ದಾಸರಹಳ್ಳಿ: ‘ದಾಸರಹಳ್ಳಿ ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಶಾಸಕ ಎಸ್. ಮುನಿರಾಜು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಅವರು, ‘ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಕ್ಷೇತ್ರದೆಲ್ಲೆಡೆ ನೀರಿನ ಸಮಸ್ಯೆಯಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಲಮಂಡಳಿ ಅಧ್ಯಕ್ಷರ ಗಮನಕ್ಕೆ ತರಲಾಗಿತ್ತು. ಸಿಎಂ ಮತ್ತು ಡಿಸಿಎಂ ಅವರಿಗೂ ಎರಡು ಬಾರಿ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಲ ಮಂಡಳಿಯವರು ಯಾವುದೇ ಒಂದು ರಸ್ತೆಯಲ್ಲಿ ಸಿಂಟೆಕ್ಸ್ ಟ್ಯಾಂಕ್‌ ಇಟ್ಟರೆ, ಮಹಡಿಗಳಲ್ಲಿ ವಾಸ ಮಾಡುತ್ತಿರುವವರು ನೀರನ್ನು ಅಲ್ಲಿಗೆ ತೆಗೆದುಕೊಂಡು ಹೋಗಲು ಸಾಧ್ಯವೇ? ವಯಸ್ಸಾದವರು, ಮಹಿಳೆಯರು ನೀರನ್ನು ಕೊಂಡೊಯ್ಯುವುದು ಅಸಾಧ್ಯ’ ಎಂದು ಹೇಳಿದರು.

ADVERTISEMENT

‘100 ಬೋರ್‌ವೆಲ್‌ ಕೊರೆಸಲು ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು. ಅನುದಾನ ನೀಡಿದ್ದರೆ ಸಲ್ಪಮಟ್ಟಿಗಾದರೂ ಬೇಸಿಗೆಯ ನೀರಿನ ಬವಣೆ ತಪ್ಪಿಸಬಹುದಾಗಿತ್ತು. ಆದರೆ, ಇದು ಕಿವುಡ ಮತ್ತು ಕುರುಡು ಸರ್ಕಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈಗಾಗಲೇ ಪರಿಸ್ಥಿತಿ ಹದಗೆಟ್ಟಿದ್ದು ಜನರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಕಾವೇರಿ ಐದನೇ ಹಂತ ಕಾಮಗಾರಿ ತ್ವರಿತ ಗತಿಯಲ್ಲಿ ಆಗಿದ್ದರೆ ಸ್ವಲ್ಪಮಟ್ಟಿಗಾದರೂ ಸಮಸ್ಯೆ ಬಗೆಹರಿಯುತ್ತಿತ್ತು. ಇತ್ತ ಕೊಳವೆಬಾವಿಗಳು ಬತ್ತಿವೆ. ಕಾವೇರಿ ನೀರು ಕೂಡ ಬರುತ್ತಿಲ್ಲ. ಜನರು ನೀರಿನ ಸಮಸ್ಯೆಯಿಂದ ಜನರು ತತ್ತರಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.