ನೆಲಮಂಗಲ: ಸೌಜನ್ಯಾ ಕೊಲೆ ವಿಚಾರ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಕಾಂಗ್ರೆಸ್ ವತಿಯಿಂದ ಶಾಸಕ ಎನ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಕಾರುಗಳಲ್ಲಿ ಯಾತ್ರೆ ಕೈಗೊಳ್ಳಲಾಯಿತು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಿಂದ ಮಧ್ಯಾಹ್ನ ಯಾತ್ರೆ ಹೊರಟಿತು. ಕಂಬಾಳು, ಜಗ್ಗಣ್ಣಯ್ಯ, ಬಂಡೆಮಠ ಹಾಗೂ ವಿವಿಧ ಮಠಾಧೀಶರು ಸಹ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಶಾಸಕ ಎನ್.ಶ್ರೀನಿವಾಸ್, ‘ಸರ್ಕಾರ ಧರ್ಮಸ್ಥಳದ ಪರವಾಗಿದೆ. ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಲು ತನಿಖೆ ಕೈಗೊಳ್ಳಲಾಗಿದೆ. ಸತ್ಯ ಹೊರಬರಲಿದೆ. ಯಾವುದೇ ಶಕ್ತಿಗಳಿಂದಲೂ ಧರ್ಮಕ್ಷೇತ್ರವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದರು.
ಮುಖಂಡ ಪೇಂಟ್ ಮಂಜುನಾಥ್ ಅವರು ಎರಡು ಲಾರಿಗಳಲ್ಲಿ ದವಸ ಧಾನ್ಯ, ಎಣ್ಣೆ, ಬೆಲ್ಲ, ತರಕಾರಿಗಳನ್ನು ಧರ್ಮಸ್ಥಳಕ್ಕೆ ಕೊಂಡೊಯ್ದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಸದಸ್ಯ ಬಿ.ಜಿ.ವಾಸು, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಭ್, ಮುಖಂಡ ಎಂ.ಕೆ.ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.