ಚಿಂತಕ ಶಿವಸುಂದರ್
ಸಂಗ್ರಹ ಚಿತ್ರ
ಬೆಂಗಳೂರು: ‘ಧರ್ಮ ಹಾಗೂ ಧರ್ಮಸ್ಥಳದ ಹಿಂದಿರುವ ರಾಜಕೀಯವನ್ನು ಪ್ರಜಾಪ್ರಭುತ್ವವನ್ನು ರಕ್ಷಿಸುವವರು ಅರ್ಥ ಮಾಡಿಕೊಳ್ಳಬೇಕು’ ಎಂದು ಚಿಂತಕ ಶಿವಸುಂದರ್ ಹೇಳಿದರು.
ಸಮಾನ ಮನಸ್ಕಾರ ವೇದಿಕೆ ಗುರುವಾರ ಆಯೋಜಿಸಿದ್ದ ‘ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಹಾಗೂ ಪತ್ರಕರ್ತರ ಮೇಲಿನ ಹಲ್ಲೆಯ ಖಂಡನಾ ಸಭೆ’ಯಲ್ಲಿ ಅವರು ಮಾತನಾಡಿದರು.
‘ಮನುಸ್ಮೃತಿಯಲ್ಲಿ ಧರ್ಮವನ್ನು ಯಾರು ರಕ್ಷಿಸುತ್ತಾರೋ, ಅಂತಹವರನ್ನು ಧರ್ಮ ರಕ್ಷಿಸುತ್ತದೆ ಎಂದಿತ್ತು. ಆದರೆ, ಈಗ ಧರ್ಮಸ್ಥಳವನ್ನು ಯಾರು ರಕ್ಷಿಸುತ್ತಾರೋ, ಅಂತಹವರನ್ನು ಧರ್ಮಸ್ಥಳ ರಕ್ಷಿಸುತ್ತದೆ ಎಂಬಂತಾಗಿದೆ’ ಎಂದರು.
‘ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದ ಯೂಟ್ಯೂಬರ್ಸ್ಗಳು ಹಾಗೂ ಸ್ವತಂತ್ರ ಪತ್ರಿಕೋದ್ಯಮಿಗಳು ಅತ್ಯಂತ ಗಹನವಾದ ಹಾಗೂ ಗಂಭೀರವಾದ ಚರ್ಚೆಗಳನ್ನು ಮಾಡುತ್ತಿದ್ದಾರೆ. ನಾವು ಹೋರಾಟ ಮಾಡುತ್ತಿರುವ ಸಂದರ್ಭ ಬಹಳ ಗಂಭೀರವಾಗಿದೆ. ಸರ್ಕಾರವನ್ನು ವಿಮರ್ಶಿಸಿದರೆ, ದೇಶವನ್ನೇ ವಿಮರ್ಶೆ ಮಾಡಿದಂತೆ ಎಂದು ಭಾವಿಸುವ ನ್ಯಾಯಮೂರ್ತಿಗಳಿದ್ದಾರೆ. ಆಡಳಿತಾಧಿಕಾರಿಯನ್ನು ವಿಮರ್ಶಿಸಿದರೆ, ದೇವರನ್ನೇ ಬೈಯುತ್ತಿದ್ದಾರೆ ಎಂದು ಜನರನ್ನು ಎತ್ತಿಕಟ್ಟುವವರು ಇದ್ದಾರೆ’ ಎಂದು ಹೇಳಿದರು.
ವೇದವಲ್ಲಿ, ಪದ್ಮಲತಾ, ಸೌಜನ್ಯ ಪ್ರಕರಣಗಳಲ್ಲಿ ಆಸ್ತಿ, ಅಧಿಕಾರ, ಸಂಪತ್ತಿನ ಜತೆಗೆ ವೈರುಧ್ಯವಿರುವ ಒಂದು ಮೇಲ್ವರ್ಗಕ್ಕೆ ಸಂಬಂಧ ಇರುವ ಆರೋಪವಿದೆ. ಈಗ ಧರ್ಮಸ್ಥಳದ ವ್ಯಾಪ್ತಿಯಲ್ಲಿ ಅನೇಕ ಅಸ್ತಿಪಂಜರಗಳು ಸಿಗುತ್ತಿವೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.
ಪತ್ರಕರ್ತ ಡಿ. ಉಮಾಪತಿ, ಹೈಕೋರ್ಟ್ನ ಹಿರಿಯ ವಕೀಲ ಎಸ್. ಬಾಲನ್. ಲೇಖಕಿ ರೇಣುಕಾ ನಿಡಗುಂದಿ, ವಿಚಾರವಾದಿ ಮುರಳಿಕೃಷ್ಣ, ಸಾಮಾಜಿಕ ಹೋರಾಟಗಾರ ಮಲ್ಲು ಕುಂಬಾರ್ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.