
ಬೆಂಗಳೂರು: ಬಾಲಭವನದಲ್ಲಿ ಬುಧವಾರ ಶಾಲಾ ಮಕ್ಕಳ ಕಲರವ, ಸಂಭ್ರಮ ವಾತಾವರಣವನ್ನೇ ಉಲ್ಲಾಸಗೊಳಿಸಿತು. ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ (ಡಿಎಚ್ಐಇ) ಹಮ್ಮಿಕೊಂಡಿದ್ದ ‘ಡಿಎಚ್ಐಇ ಎಕ್ಸ್ಪ್ರೆಷನ್ಸ್’ ಅಂತರ ಶಾಲಾ ಸ್ಪರ್ಧೆ ಇದಕ್ಕೆ ಕಾರಣವಾಗಿತ್ತು.
ಮೂರು ದಿನಗಳ ಈ ಹಬ್ಬದ ಮೊದಲ ದಿನ 350ಕ್ಕೂ ಅಧಿಕ ವಿದ್ಯಾರ್ಥಿಗಳು ಕೈಯಲ್ಲಿ ಬಣ್ಣ, ಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ಹಿಡಿದುಕೊಂಡು ಬಂದಿದ್ದರು.
ಚಿತ್ರಕಲಾ ಸ್ಪರ್ಧೆಯಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳು ಭಾಗವಹಿಸಿದ್ದರು. ನೀರಿನೊಳಗಿನ ಜೀವನ, ಭಾರತದ ಉತ್ಸವಗಳ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಚಿತ್ರ ಬಿಡಿಸಿದರು. ಸಮುದ್ರಜೀವಿಗಳು, ಹವಳದ ಬಂಡೆಗಳು, ದೇಶದ ವಿವಿಧ ಪ್ರದೇಶಗಳ ವಿವಿಧ ಹಬ್ಬಗಳ ದೃಶ್ಯಗಳು ಬಿಳಿ ಹಾಳೆ ಮೇಲೆ ಪಡಿಮೂಡಿದವು. ಭಾರತೀಯ ಪರಂಪರೆ ಮತ್ತು ಸಂಸ್ಕೃತಿ, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಭಾರತದ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಚಿತ್ತಾರ ಬಿಡಿಸಿದರು. ಸಾಂಸ್ಕೃತಿಕ ಗುರುತುಗಳು, ಪರಿಸರ ಕಾಳಜಿ ಚಿತ್ರಗಳ ಮೂಲಕ ಅರಳಿದವು.
ಚಿತ್ರಕಲಾ ಪರಿಷತ್ತಿನ ರೋಹಿಣಿ ಭಾರ್ವಾಡಿಯಾ ಮತ್ತು ತರಂಗ್ ಆಚಾರ್ಯ, ಕ್ಯಾಲಿಗ್ರಫಿ ತಜ್ಞೆ ಕಲ್ಪನಾ ಬ್ರಹ್ಮದೇಶೆಮ್ ಅವರು ಅತ್ಯುತ್ತಮ ಕಲಾಕೃತಿಗಳನ್ನು ನಿರ್ಣಯಿಸಿದರು. ಅವುಗಳ ವ್ಯಾಖ್ಯಾನ ಮತ್ತು ತಂತ್ರಗಳನ್ನು ಗಮನಿಸಿ ಪ್ರಶಸ್ತಿ ಯಾರಿಗೆ ಎಂದು ನಿರ್ಣಯಿಸಿದರು.
ಹಿರಿಯ ಮತ್ತು ಕಿರಿಯ ವಿಭಾಗದ ವಿದ್ಯಾರ್ಥಿಗಳಿಗೆ ಕ್ವಿಜ್ ಮಾಸ್ಟರ್, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಳ್ಮಣಿ ಅವರು ರಸಪ್ರಶ್ನೆ ನಡೆಸಿಕೊಟ್ಟರು. 45ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಅವರಿಗೆ 20 ಪ್ರಶ್ನೆಗಳನ್ನು ನೀಡಿದರು. ಎರಡೂ ವಿಭಾಗದಲ್ಲಿ ಮೊದಲ ಸ್ಥಾನಗಳನ್ನು ಪಡೆದ ತಲಾ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾದವು.
ಅಂತಿಮ ಸುತ್ತಿನಲ್ಲಿ ಕಿರಿಯರ ವಿಭಾಗದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಎರಡೆರಡು ತಂಡಗಳು ಒಂದೇ ರೀತಿ ಅಂಕಗಳಿಸಿ ಕ್ವಿಜ್ ಮಾಸ್ಟರ್ಗೆ ಸವಾಲೆಸೆದವು. ಎರಡನೇ ಸ್ಥಾನಕ್ಕೆ ಮತ್ತು ನಾಲ್ಕನೇ ಸ್ಥಾನಕ್ಕೆ ಹೆಚ್ಚುವರಿ ಪ್ರಶ್ನೆಗಳನ್ನು ನೀಡಿ ತಂಡಗಳನ್ನು ನಿರ್ಣಯಿಸಲಾಯಿತು.
ಸ್ವಿಟ್ಜರ್ಲೆಂಡ್ನಲ್ಲಿರುವ ಆಲ್ಬರ್ಟ್ ಐನ್ಸ್ಟೈನ್ ಪ್ರತಿಮೆ ಗುರುತಿಸುವುದು, ಹಿಮ ಚಿರತೆ, ಸ್ಯಾಂಕಿ ಕೆರೆ ಪತ್ತೆಹಚ್ಚುವುದು ಮತ್ತು ಕಾಲ್ಬೆರಳುಗಳ ಸಂಖ್ಯೆಯ ಆಧಾರದ ಮೇಲೆ ಪ್ರಾಣಿಗಳನ್ನು ಗುರುತಿಸುವುದೂ ಸೇರಿದಂತೆ ಕುತೂಹಲಕಾರಿ ಪ್ರಶ್ನೆಗಳು ಮಕ್ಕಳ ಬುದ್ಧಿಮತ್ತೆಗೆ ಸವಾಲು ಎಸೆದವು.
ಸ್ಪರ್ಧಾ ತಂಡಗಳು ಉತ್ತರಿಸದ ಪ್ರಶ್ನೆಗಳು ಪ್ರೇಕ್ಷಕರತ್ತ ತಿರುಗಿದವು. ಉತ್ತರಿಸಿದವರಿಗೆ ಸ್ಥಳದಲ್ಲೇ ವಿಶೇಷ ಬಹುಮಾನ ನೀಡಲಾಯಿತು.
ಡಿ.4ರಂದು ಸ್ಪೆಲ್ ಬೀ ಮತ್ತು ವರ್ಡ್ ವೈಂಡರ್, ಡಿ.5ರಂದು ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
‘ಡಿಎಚ್ಐಇ ಎಕ್ಸ್ಪ್ರೆಷನ್ಸ್’ ಅಂತರ ಶಾಲಾ ಸ್ಪರ್ಧೆಯಲ್ಲಿ ರಸಪ್ರಶ್ನೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು ಪ್ರಜಾವಾಣಿ ಚಿತ್ರ
ಹಿರಿಯರ ವಿಭಾಗ ಪ್ರಥಮ: ವೇದಾಂತ್ ಮತ್ತು ಹಿಮಾಂಶು ಬಂಟ್ಸ್ ಸಂಘ ಆರ್ಎನ್ಎಸ್ ವಿದ್ಯಾನಿಕೇತನ ದ್ವಿತೀಯ: ಪ್ರಣವ್ ಮತ್ತು ಶ್ರೀಕಿರಣ್ ಅಯ್ಯಪ್ಪ ಶಿಕ್ಷಣ ಕೇಂದ್ರ ಚಿಕ್ಕಬಾಣಾವರ ತೃತೀಯ: ಧೀರಜ್ ಮತ್ತು ಶಾನ್ ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್ ಚತುರ್ಥ: ವಿಹಾನ್ ಮತ್ತು ಅಭಿಷೇಕ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕೋರಮಂಗಲ ಕಿರಿಯರ ವಿಭಾಗ ಪ್ರಥಮ: ಅಬಿನಾಶ್ ಮೊಹಪಾತ್ರೊ ಮತ್ತು ಟಿ. ಪ್ರಣವ್ - ಸೇಂಟ್ ಮೈಕೆಲ್ಸ್ ಹೈಸ್ಕೂಲ್ ದ್ವಿತೀಯ: ನಿಖಿಲ್ ಮತ್ತು ಅದ್ವೈತ್ ಚಿನ್ಮಯ ವಿದ್ಯಾಲಯ ಹಲಸೂರು ತೃತೀಯ: ಪಾರ್ಥ್ ಅಗರ್ವಾಲ್ ಮತ್ತು ಸಿದ್ಧಾರ್ಥ್ ಸಿ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಿಲ್ಕ್ ಬೋರ್ಡ್ ಚತುರ್ಥ: ವೈಷ್ಣವಿ ಎಸ್.ಕೆ. ಮತ್ತು ಪ್ರಣವ್ ಎಸ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ರಾಜಾಜಿನಗರ
ಹಿರಿಯರ ವಿಭಾಗ
ಪ್ರಥಮ: ನಿಧಿ ಎಸ್., ಎಂಬೆಸಿ ಪಬ್ಲಿಕ್ ಸ್ಕೂಲ್, ಮಾಗಡಿ ರಸ್ತೆ
ದ್ವಿತೀಯ: ತನ್ಮಯ್ ಎಚ್.ಆರ್., ಶ್ರೀ ಅಯ್ಯಪ್ಪ ಶಿಕ್ಷಣ ಕೇಂದ್ರ, ಚಿಕ್ಕಬಾಣಾವರ
ತೃತೀಯ: ನಿಯಾನಾಗಲ್, ಬಾಲ್ಡ್ವಿನ್ ಇಂಟರ್ನ್ಯಾಷನಲ್ ಸ್ಕೂಲ್
ಸಮಾಧಾನಕರ: ಹಲಸೂರು ಚಿನ್ಮಯ ವಿದ್ಯಾಲಯದ ಪೂರ್ಣಶ್ರೀ, ಹಾವನೂರು ಸೌಂದರ್ಯ ಶಾಲೆಯ ವರ್ಷಾ ಹೆಗಡೆ, ಎಂಟಿಬಿ ಜ್ಞಾನ ಜ್ಯೋತಿ ವಿದ್ಯಾನಿಕೇತನದ ಪ್ರೀತು ಪಿ., ಶ್ರೀವಿದ್ಯಾ ಮಂದಿರ ಎಜುಕೇಷನ್ ಸೊಸೈಟಿಯ ನಮ್ರತಾ ದಾಸರಿ, ಮಾರತ್ಹಳ್ಳಿಯ ಎಂವಿಜೆ ಇಂಟರ್ನ್ಯಾಷನಲ್ ಸ್ಕೂಲ್ನ ದಿವ್ಯಾಂಶಿ ಮಂಡಲ್
ಕಿರಿಯರ ವಿಭಾಗ
ಪ್ರಥಮ: ಆರುಷ್ ಆರ್., ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಶವಂತಪುರ
ದ್ವಿತೀಯ: ದಾನಂತಿ ಭಟ್ ಎಸ್., ಶ್ರೀ ಅಯ್ಯಪ್ಪ ಶೈಕ್ಷಣಿಕ ಕೇಂದ್ರ
ತೃತೀಯ: ವೈಭವಿ ಕೆ.ಎಂ., ವಿಎಲ್ಎಸ್ ಇಂಟರ್ನ್ಯಾಷನಲ್ ಸ್ಕೂಲ್
ಸಮಾಧಾನಕರ: ಕನಕಪುರ ಬ್ಲಾಸಮ್ ಸ್ಕೂಲ್ನ ಹರ್ಷಿಣಿ ಜಿ., ಯಶವಂತಪುರ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಯುವನ್ ಸಿಂಗ್, ಅತ್ತಿಗುಪ್ಪೆ ಬಂಟ್ಸ್ ಸಂಘ ಆರ್ಎನ್ಎಸ್ನ ತನಿಷ್ ಗರೋಡಿ, ಸೋಫಿಯಾ ಪ್ರೌಢಶಾಲೆಯ ವನಾಲಿಕಾ ಕೆ., ಅತ್ತಿಗುಪ್ಪೆ ಬಂಟ್ಸ್ ಸಂಘ ಆರ್ಎನ್ಎಸ್ನ ಇಶಾನ್ ಎನ್. ಶೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.