ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಅವರು ಬಿಬಿಎಂಪಿಯ ದಕ್ಷಿಣ ವಲಯದ ವಾರ್ ರೂಂ ಪರಿಶೀಲನೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೊದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ವಾರ್ ರೂಂ ಸಿಬ್ಬಂದಿಯ ಹೆಸರನ್ನು ಒಂದೊಂದಾಗಿ ಓದಿದ್ದಾರೆ (ಎಲ್ಲ ಮುಸ್ಲಿಂ ಹೆಸರುಗಳು) ‘ಇವರನ್ನು ನೇಮಿಸಿದ್ದು ಯಾರು’ ಎಂದು ಪ್ರಶ್ನಿಸಿದ್ದಾರೆ.
‘ನಾವು ಅರ್ಜಿ ಕರೆದಿದ್ದೆವು. ಅರ್ಜಿ ಹಾಕಿದವರನ್ನು ಆಯ್ಕೆ ಮಾಡಿದ್ದೇವೆ’ ಎಂದು ವಲಯ ಆಯುಕ್ತರಾದ ತುಳಸಿ ಮದ್ದಿನೇನಿ ಸಮಜಾಯಿಷಿ ನೀಡಲು ಯತ್ನಿಸಿದಾಗ ಶಾಸಕರು ಮಧ್ಯಪ್ರವೇಶಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ರವಿ ಸುಬ್ರಹ್ಮಣ್ಯ, ‘ಇವರನ್ನೆಲ್ಲ ಮದರಸಾಕ್ಕೆ ನೇಮಕ ಮಾಡಿಕೊಂಡಿದ್ದೀರಾ ಅಥವಾ ಕಾರ್ಪೊರೇಷನ್ಗಾ. ನೀವು ಮಾಡುವ ಅವ್ಯವಹಾರಕ್ಕೆ ಬೀದಿ ಬೀದಿಲಿ ಜನ ನಮಗೆ ಉಗಿಯುತ್ತಿದ್ದಾರೆ’ ಎಂದು ಏರುಧ್ವನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
‘ನಾವು ಸಾಕಷ್ಟು ಅಧ್ಯಯನ ಮಾಡಿ ಸಾಕಷ್ಟು ಮಾಹಿತಿ ಕಲೆ ಹಾಕಿಯೇ ಬಂದಿದ್ದೇವೆ. ಯಾವ ಯಾವ ಹಾಸಿಗೆಗೆ ಎಷ್ಟು ದುಡ್ಡು ತೆಗೋತಿದ್ದಾರೆ. ಯಾವ ಯಾವ ಹಾಸಿಗೆ ಯಾವ ರೀತಿ ಬ್ಲಾಕ್ ಮಾಡಿದ್ದಾರೆ ಎಂಬ ಸಂಪೂರ್ಣ ವಿವರ ಪಡೆದುಕೊಂಡೇ ಬಂದಿದ್ದೇವೆ. ಇದಕ್ಕೆಲ್ಲ ಸಾಕ್ಷ್ಯಗಳೂ ಇವೆ’ ಎಂದರು.
ಶಾಸಕ ಸತೀಶ ರೆಡ್ಡಿ, ‘ನೀವು ಏನು ಭಾವಿಸಿದ್ದೀರಿ. ದಾರಿಯಲ್ಲಿ ಹೋಗುವವರನ್ನು ಕೂರಿಸಿ ಹಾಸಿಗೆ ಬ್ಲಾಕ್ ಮಾಡುವ ದಂಧೆ ಮಾಡುತ್ತಿದ್ದೀರಿ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದೀರಿ. ನಾವೆಲ್ಲ ಬಿಜೆಪಿ ಶಾಸಕರೇ. ಇಷ್ಟು ದಿನ ತಾಳ್ಮೆಯಿಂದ ಕಾದೆವು. ಇನ್ನೆಷ್ಟು ದಿನ ತಾಳ್ಮೆ ವಹಿಸಲು ಸಾಧ್ಯ. ಬೆಂಗಳೂರಿನವರೆಲ್ಲ ಸತ್ತು ಹೋದರೆ ಜನ ಶಾಪ ಹಾಕೋದು ನಮಗೇ. ಇವೆಲ್ಲವನ್ನು ಕಂಡೂ ಸುಮ್ಮನಿರಬೇಕಾ’ ಎಂದು ಪ್ರಶ್ನಿಸಿದ್ದಾರೆ.
ತೇಜಸ್ವಿ ಸೂರ್ಯ, ‘ಇಲ್ಲಿ ಯಾರಾದರೂ ಎಂಬಿಬಿಎಸ್ ರಿಪೋರ್ಟಿಂಗ್ ಅಧಿಕಾರಿಗಳು ಇದ್ದಾರೆಯೇ. ಹೋಂ ಕ್ವಾರಂಟೈನ್ ಬಗ್ಗೆ ಮಾಹಿತಿ ನೀಡಲು ಎಂಬಿಬಿಎಂಎಸ್ ವೈದ್ಯರು ಇರಬೇಕಾ, ಬಿಡಿಎಸ್, ಬಿಎಎಂಎಸ್, ಯುನಾನಿ ವೈದ್ಯರು ಇರಬೇಕಾ’ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.