ವಂಚನೆ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರನ್ನು ಬೆದರಿಸಿದ ವಂಚಕರು ₹30.99 ಲಕ್ಷ ದೋಚಿರುವ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಔರಾದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರ ದೂರಿನ ಮೇರೆಗೆ ಸಿಐಡಿಯ ಸೈಬರ್ ಕ್ರೈಂ ಠಾಣೆಯಲ್ಲಿ ಸಂದೀಪ್ ಕುಮಾರ್ ಮತ್ತು ನೀರಜ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಆಗಸ್ಟ್ 12ರಂದು ಗುಂಡಪ್ಪ ವಕೀಲ್ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ತಾನು ಸಿಬಿಐ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ. ಬಳಿಕ, ‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಯ ಬಳಿ ನಿಮ್ಮ ಬ್ಯಾಂಕ್ ಖಾತೆಯ ದಾಖಲೆಗಳು, ಎಟಿಎಂ ಕಾರ್ಡ್ ದೊರೆತಿವೆ. ಹಾಗಾಗಿ ನಿಮ್ಮನ್ನು ಬಂಧಿಸುತ್ತಿದ್ದೇವೆ’ ಎಂದು ಬೆದರಿಸಿದ್ದಾನೆ. ಗುಂಡಪ್ಪ ಅವರು ತಪ್ಪಿತಸ್ಥರಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಂಡು, ವಿಡಿಯೊ ಕಾನ್ಫರೆನ್ಸ್ ಮೂಲಕ ನಕಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆಸ್ತಿಯ ಬಗ್ಗೆ ತನಿಖೆ ನಡೆಸಲು ಆರ್ಟಿಜಿಎಸ್ ಮೂಲಕ ಬ್ಯಾಂಕ್ ಖಾತೆಗೆ ₹10 ಲಕ್ಷ ವರ್ಗಾಯಿಸಲು ಸೂಚಿಸಿದ್ದಾರೆ. ಈ ಹಣವನ್ನು ತನಿಖೆ ಪೂರ್ಣವಾದ ನಂತರ ಮರಳಿಸಲಾಗುವುದು ಎಂದು ಹೇಳಿ, 8 ದಿನಗಳಲ್ಲಿ ಆರೋಪಿಗಳು ಒಟ್ಟು ₹30.99 ಲಕ್ಷ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.