ADVERTISEMENT

ಮೌಲ್ಯಮಾಪನ ಮುಗಿದ 2 ದಿನಕ್ಕೆ ಫಲಿತಾಂಶ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿಜಿಟಲ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 5:32 IST
Last Updated 18 ಜನವರಿ 2020, 5:32 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ 1 ಮತ್ತು 3ನೇ ಸೆಮಿಸ್ಟರ್‌ ಪರೀಕ್ಷೆಗಳ ಡಿಜಿಟಲ್‌ ಮೌಲ್ಯಮಾಪನ ನಡೆದಿದ್ದು, ಪ್ರಕ್ರಿಯೆ ಮುಗಿದ ಎರಡೇ ದಿನದಲ್ಲಿ ಫಲಿತಾಂಶಪ್ರಕಟವಾಗಲಿದೆ.

ಈ ಬಾರಿ5ನೇ ಸೆಮಿಸ್ಟರ್ ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾತ್ರ ಸಾಂಪ್ರದಾಯಿಕರೀತಿಯಲ್ಲಿ ನಡೆಯುತ್ತಿದೆ. 10 ದಿನದೊಳಗೆ ಅದು ಕೊನೆಗೊಳ್ಳುವ ನಿರೀಕ್ಷೆ ಇದೆ.

‘12 ಕೇಂದ್ರಗಳಲ್ಲಿ ಡಿಜಿಟಲ್‌ ಮೌಲ್ಯಮಾಪನ ನಡೆಯುತ್ತಿದೆ. ಈಗಾಗಲೇ 7 ಲಕ್ಷ ಉತ್ತರ ಪತ್ರಿಕೆಯ ಹಾಳೆಗಳ ಸ್ಕ್ಯಾನಿಂಗ್ ಮುಗಿದಿದೆ. ತಿಂಗಳಲ್ಲಿ ಮೌಲ್ಯಮಾಪನ ಕೊನೆಗೊಳ್ಳಲಿದೆ’ ಎಂದು ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಶಿವರಾಜ್‌ ತಿಳಿಸಿದರು.

ADVERTISEMENT

‘ಸದ್ಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾತ್ರ ಡಿಜಿಟಲ್‌ ಮೌಲ್ಯಮಾಪನ ನಡೆಯುತ್ತಿದೆ. ಇಂಥ ವ್ಯವಸ್ಥೆ ಜಾರಿಗೊಳಿಸಿದ ರಾಜ್ಯದ ಎರಡನೇ ವಿಶ್ವವಿದ್ಯಾಲಯ ಎಂಬ ಶ್ರೇಯ ಬೆಂಗಳೂರು ವಿ.ವಿ.ಯದ್ದು. ಈ ವರ್ಷದ ನವೆಂಬರ್‌ ವೇಳೆಗೆ ಸಂಪೂರ್ಣ ಡಿಜಿಟಲ್‌ ಮಾಲ್ಯಮಾಪನ ವ್ಯವಸ್ಥೆ ಜಾರಿಗೆ ಬರಲಿದೆ. ಸುಮಾರು ₹ 1ಕೋಟಿ ವೆಚ್ಚದಲ್ಲಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಇನ್ನು ಮುಂದೆ ಒಂದು ಸೆಮಿಸ್ಟರ್‌ನ ಮೌಲ್ಯಮಾಪನ ವೆಚ್ಚ ₹1.50 ಕೋಟಿಯಿಂದ ₹ 25 ಲಕ್ಷಕ್ಕೆ ಇಳಿಯಲಿದೆ’ ಎಂದು ಅವರು ವಿವರಿಸಿದರು.

ವಾರದೊಳಗೆ 50 ಸಾವಿರ ಅಂಕಪಟ್ಟಿ ಮುದ್ರಣ: ‘ಪದವಿ ಪ್ರಮಾಣಪತ್ರದ ಜತೆಗೆಅಂಕಪಟ್ಟಿ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಒಂದು ವಾರದೊಳಗೆ 50 ಸಾವಿರ ಅಂಕಪಟ್ಟಿ ಹಾಗೂ ತಿಂಗಳೊಳಗೆ ಎಲ್ಲ 3 ಲಕ್ಷ ಅಂಕಪಟ್ಟಿಗಳನ್ನು (2018ರಿಂದೀಚೆಗೆ ಅಂಕಪಟ್ಟಿ ಮುದ್ರಿಸುವುದು ಸ್ಥಗಿತಗೊಂಡಿತ್ತು) ಮುದ್ರಿಸಿ ಆಯಾ ಕಾಲೇಜುಗಳಿಗೆ ತಲುಪಿಸಲಿದ್ದೇವೆ’ ಎಂದು ಕುಲಸಚಿವರು ತಿಳಿಸಿದರು.

‘ನಾನು ಇಲ್ಲಿಗೆ ಕುಲಸಚಿವನಾಗಿ ಬರುವುದಕ್ಕೆ ಮೊದಲು ಪ್ರತಿ ಅಂಕಪಟ್ಟಿ ಮುದ್ರಣಕ್ಕೆ ₹ 5.50 ದರನಿಗದಿಪಡಿಸಲಾಗಿತ್ತು. ಅದನ್ನು ಕೇವಲ ₹ 25 ಪೈಸೆಗೆ ಇಳಿಸಲಾಗಿದೆ’ ಎಂದು ಅವರು
ಹೇಳಿದರು.

‘ಕುಲಪತಿ ಸೂಚನೆಯಿಂದಾಗಿ ಅಂಕಪಟ್ಟಿ ಕೊಟ್ಟಿಲ್ಲ’

‘ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿ (ಎನ್‌ಎಡಿ) ಮೂಲಕವೇ ಅಂಕಪಟ್ಟಿ ಒದಗಿಸಬೇಕು ಎಂಬ ಒಪ್ಪಂದ ಆಗಿದೆ. ಯಾರಿಗೂ ಅಂಕಪಟ್ಟಿ ಮುದ್ರಿಸಿ ಕೊಡಬೇಡಿ ಎಂದು ಕುಲಪತಿ ಅವರ ಕಟ್ಟುನಿಟ್ಟಿನ ಸೂಚನೆಯ ಕಾರಣಕ್ಕೇ ಎರಡು ವರ್ಷಗಳಿಂದ ಅಂಕಪಟ್ಟಿ ಮುದ್ರಿಸಿಕೊಡುತ್ತಿಲ್ಲ’ ಎಂದು ಪ್ರೊ.ಸಿ.ಶಿವರಾಜ್‌ ತಿಳಿಸಿದರು.

‘ಉನ್ನತ ಶಿಕ್ಷಣ, ವಿದೇಶದಲ್ಲಿ ವ್ಯಾಸಂಗ ಮೊದಲಾದ ಸಂದರ್ಭಗಳಲ್ಲಿ ವಿಶ್ವವಿದ್ಯಾಲಯ ಮುದ್ರಿಸಿ ಕೊಟ್ಟ ಅಂಕಪಟ್ಟಿಗೇ ಬೆಲೆ ಎಂಬ ಕಾರಣ ಹಲವರು ಅಂಕಪಟ್ಟಿ ಮುದ್ರಿಸಿ ಕೊಡಲು ಬೇಡಿಕೆ ಇಟ್ಟಿದ್ದರು. ಇದನ್ನುಕುಲಪತಿ ಅವರ ಗಮನಕ್ಕೆ ತರಲಾಗಿತ್ತು. ಹೀಗಾಗಿ ಡಿಸೆಂಬರ್‌ 30ರಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ವಿಷಯ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಆದೇಶದ ಪ್ರತಿ ಗುರುವಾರದವರೆಗೂ ನನ್ನ ಕೈಸೇರಿರಲಿಲ್ಲ. ಅಂಕಪಟ್ಟಿಗೆ ನಿರ್ದಿಷ್ಟ ಶುಲ್ಕ ನಿಗದಿಪಡಿಸಲಾಗಿದೆ. ಅದರ ಹೊರತಾಗಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ದುಡ್ಡು ಪಡೆದುಕೊಂಡು ಅಂಕಪಟ್ಟಿ ಮುದ್ರಿಸಲಾಗುತ್ತಿಲ್ಲ’ ಎಂದು ಪ್ರೊ.ಸಿ.ಶಿವರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.