ಬೆಂಗಳೂರು:‘ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ದೇಶಪ್ರೇಮಿ ಎಂದು ಸಮರ್ಥಿಸಿಕೊಳ್ಳುವ ಪರಿಪಾಠ ಈ ದೇಶದಲ್ಲಿ ಬೆಳೆಯುತ್ತಿದೆ. ದೇಶದಲ್ಲಿ ಇಂದು ಅಲ್ಪಸಂಖ್ಯಾತರು ಹಾಗೂ ದಲಿತರು ದನಿ ಎತ್ತದಂತೆ ಮಾಡಲಾಗುತ್ತಿದೆ’ ಎಂದುಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಬುದ್ಧ, ಬಸವ, ಅಂಬೇಡ್ಕರ್, ಕೆಂಪೇಗೌಡ, ವಾಲ್ಮೀಕಿ ಹಾಗೂ ಕನಕ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದ್ವೇಷ, ಹಿಂಸೆಯನ್ನು ಸಮರ್ಥನೆ ಮಾಡಿಕೊಳ್ಳುವ ಸಿದ್ಧಾಂತಗಳು ತಲೆ ಎತ್ತಿ ಓಡಾಡುತ್ತಿವೆ. ಇಂತಹ ಹಿಂಸಾತ್ಮಕ ಶಕ್ತಿಗಳಿಂದ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಎದುರಾಗುವುದು ನಿಶ್ಚಿತ. ಒಂದು ಸೃಜನಶೀಲ ಮತ್ತು ಚಲನಶೀಲ ಸಮಾಜದಲ್ಲಿ ಇಂತಹ ವೈಪರೀತ್ಯಗಳು ಎದುರಾಗುತ್ತವೆ. ದಲಿತರ ಮೇಲೆ ಅತ್ಯಾಚಾರ, ಜಾತಿ ನಿಂದನೆ, ಶೋಷಣೆ ಹೆಚ್ಚುತ್ತಿದೆ’ ಎಂದರು.
ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ‘ಏಕ ಸಂಸ್ಕೃತಿಯ ಪರಾಕಾಷ್ಠೆಯಲ್ಲಿ ದೇಶವನ್ನು ಹಾಳು ಮಾಡುವ ರಾಜಕಾರಣ ನಿಲ್ಲಬೇಕು. ಬಹು ಸಂಸ್ಕೃತಿಯ ವಿಚಾರಧಾರೆಯ ರಾಜಕಾರಣ ಬರಬೇಕು. ಆಗ ಮಾತ್ರ ದೇಶಕ್ಕೆ ಭವಿಷ್ಯ ಉಜ್ವಲವಾಗಲಿದೆ. ಸಮಾಜವನ್ನು ಸುಧಾರಿಸಬೇಕಾದ ಸ್ವಾಮೀಜಿಗಳು ತಮ್ಮ ಜವಾಬ್ದಾರಿ ಮರೆತು ರಾಜಕೀಯದ ಬೆನ್ನು ಹತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.