ಬೆಂಗಳೂರು: ‘ತನಗೆ ಮನೆ ಮಾರುವುದಾಗಿ ಹೇಳಿ ಹಂತ ಹಂತವಾಗಿ ₹50 ಲಕ್ಷ ಹಣ ಪಡೆದಿದ್ದ ಮಹಿಳೆ ಈಗ ಬೇರೊಬ್ಬರಿಗೆ ಮನೆ ಮಾರಾಟ ಮಾಡಿದ್ದಾರೆ. ತನ್ನಿಂದ ಪಡೆದ ಹಣವನ್ನು ಈವರೆಗೂ ಹಿಂತಿರುಗಿಸಿಲ್ಲ’ ಎಂದು ಚಲನಚಿತ್ರ ನಿರ್ದೇಶಕ ನಾಗಶೇಖರ್ ಅವರು ರಾಜರಾಜೇಶ್ವರಿನಗರಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಆಧಾರದಲ್ಲಿ ಪೊಲೀಸರು ರಾಜರಾಜೇಶ್ವರಿ ನಗರ ನಿವಾಸಿಗಳಾದ ಮೀನಾ ಹಾಗೂ ರಾಜ್ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಆರ್.ಆರ್.ನಗರದ ಜಯಣ್ಣ ಲೇಔಟ್ನಲ್ಲಿ ಮನೆ ಖರೀದಿಸಲು ನಾಗಶೇಖರ್ ನಿರ್ಧರಿಸಿದ್ದರು. ಮೀನಾ ಮನೆ ನೀಡಲು ಒಪ್ಪಿದ್ದರು. ₹2.70 ಕೋಟಿಗೆ ಮನೆ ಖರೀದಿಸುವ ಕುರಿತು ಮಾತುಕತೆ ನಡೆದಿತ್ತು. 2020ರ ಆಗಸ್ಟ್ನಲ್ಲಿ ಖರೀದಿ ಒಪ್ಪಂದ ಮಾಡಿಕೊಂಡಿದ್ದ ನಾಗಶೇಖರ್ ಹಂತ ಹಂತವಾಗಿ ಮೀನಾ ಖಾತೆಗೆ ₹50 ಲಕ್ಷ ವರ್ಗಾಯಿಸಿದ್ದರು’ ಎಂದು ಪೊಲೀಸರು ಹೇಳಿದ್ದರು.
‘ಖರೀದಿ ಒಪ್ಪಂದದ ಬಳಿಕ ಮಹಿಳೆಯು ಮತ್ತೊಬ್ಬರಿಗೆ ಮನೆ ಮಾರಿದ್ದಳು. ನಾಗಶೇಖರ್ ಅವರಿಂದ ಪಡೆದಿದ್ದ ಮೊತ್ತವನ್ನೂ ಹಿಂತಿರುಗಿಸಿರಲಿಲ್ಲ. ದೂರು ದಾಖಲಾದ ಕೂಡಲೇ ವಂಚಕರಿಬ್ಬರೂ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.