ಬೆಂಗಳೂರು: ‘ಸರ್ಕಾರದಿಂದಲೇ ಹಣ ಬಂದಿಲ್ಲ, ಪಿಂಚಣಿ ಹೇಗೆ ಕೊಡೋದು’. ‘ನೀವಿನ್ನೂ ಬದುಕಿದ್ದೀರಾ, ಕೋವಿಡ್ನಿಂದ ಸತ್ತು ಹೋಗಿರಬಹುದು ಎಂದುಕೊಂಡು ನಿಮ್ಮ ಖಾತೆಗೆ ಹಣ ಹಾಕಿಲ್ಲ..’
ಸುಮಾರು ಒಂದು ವರ್ಷದಿಂದ ಪಿಂಚಣಿಗಾಗಿ ಅಲೆದಾಡುತ್ತಿರುವ ಪೊಲಿಯೊದಿಂದ ಅಂಗವಿಕಲರಾದವರು, ಬೇರೆ ಅಂಗವಿಕಲತೆಗೆ ಗುರಿಯಾಗಿರುವವರು ಕೆಲವು ಅಧಿಕಾರಿಗಳಿಂದ ಎದುರಿಸಿದ ಮೂದಲಿಕೆಯ ಮಾತುಗಳಿವು.
‘ನನ್ನ ಎರಡೂ ಕಾಲು ಊನಗೊಂಡಿವೆ. ಶೇ 25ರಷ್ಟು ಅಂಗವೈಕಲ್ಯ ಹೊಂದಿರುವ ನನಗೆ ಮೊದಲು ಪಿಂಚಣಿ ಬರುತ್ತಿತ್ತು. ಒಂದೂವರೆ ವರ್ಷದಿಂದ ಬರುತ್ತಿಲ್ಲ. ಕಂದಾಯ ಭವನಕ್ಕೆ ಐದಾರು ಸಲ ಓಡಾಡಿದ್ದೇನೆ. ಸರ್ಕಾರದಿಂದ ಹಣ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ನೀಲಸಂದ್ರದ ಲಕ್ಷ್ಮೀ ಪಾಟೀಲ ಹೇಳಿದರು.
’ನಾನು ಪೊಲಿಯೊ ಪೀಡಿತ. ತಿಂಗಳಿಗೆ ₹1,400 ಪಿಂಚಣಿ ಬರುತ್ತಿತ್ತು. ಆದರೆ, 2020ರಲ್ಲಿ ಒಂದೇ ಒಂದು ತಿಂಗಳ ಪಿಂಚಣಿಯೂ ಬಂದಿಲ್ಲ. ನಾಗರಭಾವಿಯಲ್ಲಿರುವ ನಾಡಕಚೇರಿಗೆ ದಾಖಲೆ ಕೊಟ್ಟಿದ್ದೆ. ನಂತರ, ಕಂದಾಯ ಭವನದ ಐದನೇ ಮಹಡಿಯಲ್ಲಿರುವ ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ, ಕೊರೊನಾ ಬಂದು ನೀವು ಸತ್ತು ಹೋಗಿದ್ದರೇನೋ ಎಂದುಕೊಂಡಿದ್ದೆವು ಎಂದು ಮೂದಲಿಸಿದರು’ ಎಂಬುದಾಗಿ ನಾಯಂಡಹಳ್ಳಿ ನಿವಾಸಿ ಮಹಮ್ಮದ್ ಆರಿಫ್ ಅಳಲು ತೋಡಿಕೊಂಡರು.
‘ಪೊಲಿಯೊ ಬಂದು ನನಗೆ ನಡೆಯಲು ಆಗುವುದಿಲ್ಲ. ನಾಡಕಚೇರಿಗೆ ಹೋಗಿ ಪಿಂಚಣಿ ಆದೇಶ ಪತ್ರ, ಮನಿ ಆರ್ಡರ್ ಪ್ರತಿ, ಆಧಾರ್, ಪಾನ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳನ್ನು ನೀಡಿ ಒಂದು ವರ್ಷವೇ ಆಯಿತು. ಇನ್ನೂ ಪಿಂಚಣಿ ಬಂದಿಲ್ಲ’ ಎಂದು ಹೆಬ್ಬಾಳದ ಆನಂದನಗರ ನಿವಾಸಿ ಎಸ್. ಮುನಿಸ್ವಾಮಿ ಹೇಳಿದರು.
ಅಂಧರಿಗೂ ಸಮಸ್ಯೆ: ‘ಅಂಧರಿಗೆ ಐದಾರು ತಿಂಗಳಿನಿಂದ ಪಿಂಚಣಿ ಕೊಡುತ್ತಿಲ್ಲ. ಕಣ್ಣಿಲ್ಲದವರು ಈ ಕೋವಿಡ್ ಸಂದರ್ಭದಲ್ಲಿ ಕಚೇರಿಯಿಂದ ಕಚೇರಿಗೆ ಅಲೆದಾಡಲು ಸಾಧ್ಯವೇ‘ ಎಂದು ದೃಷ್ಟಿದೋಷ ಹೊಂದಿರುವ ಅಜಿತ್ ಪ್ರಶ್ನಿಸಿದರು.
‘ಬಹುತೇಕ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರೇ ಕೆಲಸ ಮಾಡುತ್ತಿದ್ದಾರೆ. ಇವರು ಅಂಗವಿಕಲರ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡದಿರುವುದರಿಂದ ಸಮಸ್ಯೆಯಾಗುತ್ತಿದೆ’ ಎಂದು ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ದೂರಿದರು.
‘ಪಿಂಚಣಿ ಬಂದಿಲ್ಲ ಎಂದು ಕೆಲವು ದೂರುಗಳು ಬಂದಿವೆ. ಆದರೆ, ಇದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ’ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಮುನಿರಾಜು ‘ಪ್ರಜಾವಾಣಿ‘ಗೆ ತಿಳಿಸಿದರು.
ಗುರುತಿನ ಚೀಟಿಗೂ ಅಲೆದಾಟ: ‘ಅಂಗವಿಕರಿಗಾಗಿ ವಿಶಿಷ್ಟ ಗುರುತಿನ ಚೀಟಿ (ಯುಡಿ ಐಡಿ) ನೀಡಲಾಗುತ್ತಿದೆ. ಕೆಎಸ್ಆರ್ಟಿಸಿ–ಬಿಎಂಟಿಸಿ ಬಸ್ ಪಾಸ್ ಪಡೆಯಲು ಈ ಯುಡಿ ಐಡಿ ಕೇಳುತ್ತಾರೆ. ಇಲಾಖೆಯಿಂದ ಈ ಕಾರ್ಡ್ಗಳನ್ನು ವಿತರಿಸುತ್ತಿಲ್ಲ’ ಎಂದು ಅಜಿತ್ ದೂರಿದರು.
‘ಚೆನ್ನೈನಿಂದ ಈ ಕಾರ್ಡ್ಗಳು ಬರಬೇಕು ಎನ್ನುತ್ತಾರೆ. ಆದರೆ, ಕೆಲವು ಅಧಿಕಾರಿಗಳು ಹೇಳುವಂತೆ 4,500 ಕಾರ್ಡ್ಗಳು ಬಂದಿವೆ. ಇವುಗಳನ್ನೂ ಫಲಾನುಭವಿಗಳಿಗೆ ನೀಡುತ್ತಿಲ್ಲ’ ಎಂದರು.
‘ಬಾಕಿ ಸಹಿತ ಪಾವತಿಗೆ ಕ್ರಮ’
‘ಒಂದು ವರ್ಷದಿಂದ ಪಿಂಚಣಿ ಬಂದಿಲ್ಲ ಎನ್ನುವುದನ್ನು ಒಪ್ಪಲಾಗದು. ಪ್ರತಿ ತಿಂಗಳೂ ಸುಮಾರು ಹತ್ತು ಸಾವಿರ ಹೊಸಬರು ಸೇರ್ಪಡೆಯಾಗುತ್ತಿದ್ದಾರೆ. ಸುಮಾರು 9 ಲಕ್ಷ ಅಂಗವಿಕಲರಿಗೆ ಸಕಾಲಕ್ಕೆ ಪಿಂಚಣಿ ಪಾವತಿಯಾಗುತ್ತಿದೆ’ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕ ಜಿ. ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆದಾಗ್ಯೂ, ಮಾಸಾಶನ ಅಥವಾ ಪಿಂಚಣಿ ಪಾವತಿಯಾಗಿಲ್ಲ ಎಂಬ ದೂರುಗಳು ಬಂದರೆ ಫಲಾನುಭವಿಗಳಿಗೆ ಬಾಕಿ ಸಹಿತ ಪೂರ್ಣ ಮೊತ್ತವನ್ನು ಪಾವತಿಸಲಾಗುವುದು’ ಎಂದರು.
’ಪಿಂಚಣಿ ಪಡೆಯಲು ಎಷ್ಟು ಜನ ಅರ್ಹರಿದ್ದಾರೆ ಎಂಬ ಬಗ್ಗೆ ತಹಶೀಲ್ದಾರ್ ಅವರು ಪ್ರತಿ ತಿಂಗಳು ಮಾಹಿತಿ ಕಳಿಸುತ್ತಾರೆ. ಅದನ್ನು ಪರಿಶೀಲಿಸಿ, ಶೇ 94ರಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ವಿಳಾಸ ತಪ್ಪು ಇದ್ದವರು, ಆಧಾರ್–ಪಾನ್ ಅಪ್ಡೇಟ್ ಮಾಡದಿದ್ದವರಿಗೆ ತೊಂದರೆ ಆಗಿರಬಹುದು’ ಎಂದರು.
‘ಕೆಲವರು ಎರಡು ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿದ್ದರು. ಒಂದು ವರ್ಷದಲ್ಲಿ ಇಂತಹ ಲಕ್ಷಕ್ಕೂ ಹೆಚ್ಚು ಪ್ರಕರಣ ಪತ್ತೆ ಮಾಡಿ ಆ ಖಾತೆಗಳನ್ನು ರದ್ದುಗೊಳಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.
ಅಂಕಿ–ಅಂಶ
66.41 ಲಕ್ಷ
ರಾಜ್ಯದಲ್ಲಿರುವ ಒಟ್ಟು ಪಿಂಚಣಿದಾರರು
8.43 ಲಕ್ಷ
ಪಿಂಚಣಿ ಪಡೆಯುತ್ತಿರುವ ಅಂಗವಿಕಲರು
₹ 9,000 ಕೋಟಿ
ತಿಂಗಳಿಗೆ ಪಾವತಿಸುವ ಒಟ್ಟು ಪಿಂಚಣಿ ಮೊತ್ತ
₹700 ಕೋಟಿ
ಅಂಗವಿಕಲರಿಗೆ ತಿಂಗಳಿಗೆ ಪಾವತಿಸುವ ಪಿಂಚಣಿ ಮೊತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.