ADVERTISEMENT

ಬೆಂಗಳೂರು ಗಲಭೆ: ಮಾಜಿ ಮೇಯರ್ ಸಂಪತ್ ಆರೋಪಿ

ರಾಜಕೀಯ ದ್ವೇಷವೇ ಡಿ.ಜೆ.ಹಳ್ಳಿ ಗಲಭೆಗೆ ‘ ಕಾರಣ’ | ಸಿಸಿಬಿ ಆರೋಪ ಪಟ್ಟಿಯಲ್ಲಿ ಸಂಪತ್‌ರಾಜ್, ಜಾಕೀರ್ ಹೆಸರು?

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 8:13 IST
Last Updated 13 ಅಕ್ಟೋಬರ್ 2020, 8:13 IST
ಡಿ.ಜೆ.ಹಳ್ಳಿ ಗಲಭೆ (ಸಂಗ್ರಹ ಚಿತ್ರ)
ಡಿ.ಜೆ.ಹಳ್ಳಿ ಗಲಭೆ (ಸಂಗ್ರಹ ಚಿತ್ರ)   

ಬೆಂಗಳೂರು: ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಆ. 11ರಂದು ರಾತ್ರಿ ನಡೆದಿದ್ದ ಗಲಭೆ ಸಂಬಂಧ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ಸೋಮವಾರ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

‘ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸ್ಥಳೀಯ ಕಾಂಗ್ರೆಸ್‌ ಮುಖಂಡರು ದ್ವೇಷ ಸಾಧಿಸುತ್ತಿದ್ದರು. ರಾಜಕೀಯ ದ್ವೇಷವೇ ಗಲಭೆಗೆ ಮುಖ್ಯ ಕಾರಣ’ ಎಂದು ಸಿಸಿಬಿ ಪೊಲೀಸರು 400 ‍ಪುಟಗಳ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.

ಶಾಸಕರ ಮನೆ, ಕಚೇರಿ ಹಾಗೂ ಅಕ್ಕ–ಪಕ್ಕದ ಮನೆಗಳಿಗೆ ಬೆಂಕಿ ಹಾಕಿದ್ದ ಪ್ರಕರಣದಲ್ಲಿ ಮಾತ್ರ ಈ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ADVERTISEMENT

ಕಾಂಗ್ರೆಸ್ ಮುಖಂಡರಾದ ಆರ್‌.ಸಂಪತ್ ರಾಜ್, ಅವರ ಆಪ್ತ ಸಹಾಯಕ ಅರುಣಕುಮಾರ್ , ಕಾರು ಚಾಲಕ ಸಂತೋಷ್, ಮತ್ತೊಬ್ಬ ಕಾಂಗ್ರೆಸ್ ಮುಖಂಡ ಅಬ್ದುಲ್ ಜಾಕೀಬ್ ಜಾಕೀರ್ ಸೇರಿದಂತೆ 90 ಮಂದಿಯನ್ನು ಆರೋಪಿಯನ್ನಾಗಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

‘ಇದು ಪ್ರಾಥಮಿಕ ಆರೋಪ ಪಟ್ಟಿ. ಕೃತ್ಯದಲ್ಲಿ ಭಾಗಿಯಾಗಿರುವ ಸಂಪತ್‌ ರಾಜ್, ಕೊರೊನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ ನಂತರ ಬಂಧಿಸಿ ತನಿಖೆಗೆ ಒಳಪಡಿಸಿ ಮತ್ತೊಂದು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣಗಳ ವಿಚಾರಣೆ ಮುಂದುವರಿದಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.