ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದಡಿ ಇಬ್ಬರು ಕಾರ್ಪೋರೇಟರ್ಗಳನ್ನು ಇತ್ತೀಚೆಗಷ್ಟೇ ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದ ಸಿಸಿಬಿ ಪೊಲೀಸರು, ಇದೀಗ ಆ ಹೇಳಿಕೆಯಲ್ಲಿ ಉಲ್ಲೇಖವಿರುವ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಗಲಭೆ ಹಿಂದೆ ರಾಜಕೀಯ ಉದ್ದೇಶವಿರುವ ಆಧಾರದಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು, ಕಾರ್ಪೋರೇಟರ್ಗಳಾದ ಆರ್.ಸಂಪತ್ ರಾಜ್ ಹಾಗೂ ಜಾಕೀರ್ ಅವರನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ಮಾಡಿದ್ದರು. ಸಂಪತ್ ರಾಜ್ ಅವರ ಆಪ್ತ ಸಹಾಯಕ ಅರುಣ್ಕುಮಾರ್ ಅವರನ್ನೂ ಬಂಧಿಸಿದ್ದರು. ಇದಾದ ನಂತರ, ಮೂವರ ಹೇಳಿಕೆಗಳನ್ನೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
‘ಗಲಭೆಗೂ ತಮಗೂ ಯಾವುದೇ ಸಂಬಂಧವಿಲ್ಲ’ ಎಂದು ಕಾರ್ಪೋರೇಟರ್ಗಳು ಹೇಳಿಕೆ ನೀಡಿದ್ದಾರೆ. ಆದರೆ, ಹೇಳಿಕೆಯಲ್ಲಿ ಸಾಕಷ್ಟು ಗೊಂದಲಕಾರಿ ಅಂಶಗಳಿವೆ. ಅವುಗಳ ನಿಖರತೆ ತಿಳಿಯಲು ಕೆಲ ವ್ಯಕ್ತಿಗಳನ್ನು ಸಿಸಿಬಿ ಕಚೇರಿಗೆ ಸೋಮವಾರ ಕರೆಸಿ ವಿಚಾರಣೆ ನಡೆಸಿ ಕಳುಹಿಸಲಾಗಿದೆ.
ಉಗ್ರರ ನಂಟು ಆಯಾಮ; ಪ್ರಕರಣದಲ್ಲಿ ಬಂಧಿತನಾಗಿರುವ ಸಮೀವುದ್ದೀನ್, ಅಲ್–ಹಿಂದ್ ಉಗ್ರ ಸಂಘಟನೆ ಜೊತೆ ಒಡನಾಟ ಹೊಂದಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಆತನ ಜೊತೆ ಸಂಪರ್ಕದಲ್ಲಿದ್ದ 40ಕ್ಕೂ ಹೆಚ್ಚು ಮಂದಿಯವನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ, ಗಲಭೆಗೆ ಉಗ್ರರ ನಂಟಿರುವ ಆಯಾಮದಲ್ಲೂ ತನಿಖೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.