ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಪುತ್ರ, ಎಸ್.ಎಂ. ಕೃಷ್ಣ ಮೊಮ್ಮಗ ಅಮರ್ತ್ಯ ಹೆಗ್ಡೆ ವಿವಾಹ ಆರತಕ್ಷತೆ ನಗರದ ಹೊರವಲಯದ ಪ್ರೆಸ್ಟೀಜ್ ಗಾಲ್ಫ್ಶೆಯರ್ ರೆಸಾರ್ಟ್ನಲ್ಲಿ ಬುಧವಾರ (ಫೆ. 17) ನಡೆಯಲಿದೆ.
ಎಐಐಸಿ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಗುಲಾಂ ನಬಿ ಆಜಾದ್, ಕೆ.ಸಿ. ವೇಣುಗೋಪಾಲ್, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೇರಳದ ಕಾಂಗ್ರೆಸ್ ನಾಯಕರಾದ ಉಮ್ಮನ್ಚಾಂಡಿ, ರಮೇಶ ಚೆನ್ನಿತಲ ಮತ್ತಿತರ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯಿಂದ ಬುಧವಾರ ಸಂಜೆ ನಗರಕ್ಕೆ ಬರಲಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರು, ದೇವನಹಳ್ಳಿಯಲ್ಲಿರುವ ತಾಜ್ ಹೋಟೆಲ್ನಲ್ಲಿ ತಂಗಲಿದ್ದಾರೆ. ಅಲ್ಲಿಂದಲೇ ಗುರುವಾರ ಬೆಳಿಗ್ಗೆ ದೆಹಲಿಗೆ ಮರಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
‘ಪ್ರೇಮಿಗಳ ದಿನ’ವಾದ ಭಾನುವಾರ (ಫೆ. 14) ಐಶ್ವರ್ಯಾ ಮತ್ತುಅಮರ್ತ್ಯ ಹೆಗ್ಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಈ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ ಇದ್ದು, ಸಾರ್ವಜನಿಕರು, ಕಾರ್ಯಕರ್ತರಿಗೆ ಪ್ರವೇಶ ಇರುವುದಿಲ್ಲ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.