
ರಾಮನಗರ: ‘ನಮಗೆ ಆಶೀರ್ವಾದ ಮಾಡುವ ಗುರುಗಳು ಜಪಕ್ಕೆ ಕುಳಿತಿದ್ದಾರೆ. ಅವರು ಡೇಟ್ ಕೊಡುತ್ತಾರೆ. ನಾವೂ ಶೀಘ್ರದಲ್ಲೇ ಮೂರನೇ ಡೇಟ್ ಕೊಡುತ್ತೇವೆ. ನಮ್ಮ ನಾಯಕರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಪುನರುಚ್ಛರಿಸಿದರು.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಸಂದರ್ಭದಲ್ಲೇ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರರಿಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ರಾಮನಗರವೇ ಫಾರೀನ್. ಹಾಗಾಗಿ, ಎಲ್ಲೂ ಹೋಗುವುದಿಲ್ಲ. ರಾಮನಗರದಲ್ಲಿ 40 ವರ್ಷಗಳ ಕೊಳೆ ತೊಳೆಯಬೇಕಿದೆ. ಮಾಡಬೇಕಾದ ಕೆಲಸಗಳು ಸಾಕಷ್ಟಿವೆ’ ಎಂದರು.
‘ಇಷ್ಟಕ್ಕೂ ಶಾಸಕರು ವಿದೇಶ ಪ್ರವಾಸಕ್ಕೆ ಹೋಗಬಾರದೇ? ಕೇವಲ ರಾಜಕಾರಣ ಮಾತ್ರ ಮಾಡಿಕೊಂಡಿರಬೇಕಾ? ವಿದೇಶ ಪ್ರವಾಸ ಅವರವರ ಇಚ್ಛೆಗೆ ಬಿಟ್ಟಿದ್ದು. ಅದನ್ನು ಯಾರೂ ಪ್ರಶ್ನಿಸಲಾಗದು. ನನಗೆ ನನ್ನದೇ ಆದ ಕೆಲಸಗಳಿಗೆ. ಬೆಳಿಗ್ಗೆ ಎದ್ದರೆ ಕ್ಷೇತ್ರಕ್ಕೆ ಬರುವ ನನಗೆ ಇಲ್ಲಿನ ಜನರೇ ತಂದೆ–ತಾಯಿ, ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರು’ ಎಂದು ಹೇಳಿದರು.
‘ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ’ ಎಂಬ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹುಸೇನ್, ‘ನಮ್ಮ ನಾಯಕರಾದ ಮಹದೇವಪ್ಪ ಅವರು ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೊ, ಯಾರನ್ನು ನಾಯಿ ಹಾಗೂ ಯಾರನ್ನು ಬಾಲ ಎಂದು ಕರೆದಿದ್ದಾರೊ ಗೊತ್ತಿಲ್ಲ. ಅವರಷ್ಟು ಅನುಭವ ನನಗಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರು ಸಿ.ಎಂ ಆಗುತ್ತಾರೆಂಬ ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.