ಬೆಂಗಳೂರು: ‘ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಜಾತಿ ಎಂಬ ಮನೋಭಾವ ಜನರ ಮನಸ್ಸಿನಲ್ಲಿ ಬೇರೂರಿದೆ. ಜಾತಿ ವ್ಯವಸ್ಥೆ ಇಂದಿಗೂ ಅಸ್ತಿತ್ವದಲ್ಲಿದೆ. ಅಂಬೇಡ್ಕರ್ ಆಶಯದಂತೆ ಸಮಾಜವು ಈ ಎಲ್ಲದರಿಂದ ಮುಕ್ತವಾಗಿ ಸಮಸಮಾಜ ನಿರ್ಮಾಣವಾಗಬೇಕು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ವಿಶ್ವಜ್ಞಾನಿ ಜನ ಜಾಗೃತಿ ವೇದಿಕೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಎಸ್ಸಿ/ಎಸ್ಟಿ ಬೋಧಕೇತರ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಬೇಡ್ಕರ್ ಅವರು ಶೋಷಣೆಗೆ ಒಳಗಾದ ಸಮುದಾಯವನ್ನು ಮುನ್ನಲೆಗೆ ತರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಿರೂಪಿಸಿದರು. ದೇಶದಲ್ಲಿ ಶೇ 74ರಷ್ಟು ಸಾಕ್ಷರತೆ ಪ್ರಮಾಣ ಇದೆ. ಇನ್ನೂ ಕೆಲವು ವರ್ಗ, ಸಮುದಾಯಗಳು ಶಿಕ್ಷಣದಿಂದ ವಂಚಿತವಾಗಿವೆ, ಅವರನ್ನು ಶಿಕ್ಷಿತರನ್ನಾಗಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಂ. ಎಸ್. ಜಯಕರ, ‘ಅಂಬೇಡ್ಕರ್, ಸಂವಿಧಾನದ ಮೂಲಕ ಸಮಾನತೆಯನ್ನು ಜಾರಿಗೆ ತಂದರು. ನಮ್ಮ ವಿಶ್ವವಿದ್ಯಾಲಯವು ಅಂಬೇಡ್ಕರ್ ಆಶಯ ಈಡೇರಿಸಲು ಶ್ರಮಿಸುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ನವೀನ್ ಕುಮಾರ್, ಸಿಂಡಿಕೇಟ್ ಸದಸ್ಯ ರಮೇಶ್ ಬಾಬು, ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಪಾಲಕ ಪ್ರೊ.ರಘುನಂದನ, ವಿಶ್ವವಿದ್ಯಾಲಯದ ಎಸ್ಸಿ/ಎಸ್ಟಿ ಬೋಧಕೇತರರ ಸಂಘದ ಅಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.