ನೆಲಮಹೇಶ್ವರಿ ನಗರದಲ್ಲಿ ನಟಸಾರ್ವಭೌಮ ರಾಜಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಶಾಸಕ ಎಸ್. ಮುನಿರಾಜು, ಲೋಕಾರ್ಪಣೆ ಮಾಡಿದರು.
ಪೀಣ್ಯ ದಾಸರಹಳ್ಳಿ: ನೆಲಮಹೇಶ್ವರಿ ನಗರದಲ್ಲಿ ಗಂಧದಗುಡಿ ಕನ್ನಡ ಯುವಕರ ಸಂಘ ಮತ್ತು ಕರ್ನಾಟಕ ಜನಸ್ಪಂದನ ಟ್ರಸ್ಟ್ ಸಹಯೋಗದೊಂದಿಗೆ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಟಸಾರ್ವಭೌಮ ಡಾ.ರಾಜ್ಕುಮಾರ್ ಪುತ್ಥಳಿಯನ್ನು ಶಾಸಕ ಎಸ್. ಮುನಿರಾಜು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ‘ಕನ್ನಡದಲ್ಲೂ ಚಿತ್ರನಟರು ಬೇರೆ ಬೇರೆ ಭಾಷೆಗಳಲ್ಲಿ ನಟನೆ ಮಾಡಿದ್ದರು. ಆದರೆ ರಾಜ್ಕುಮಾರ್ ಅವರು ಮಾತ್ರ ಕನ್ನಡ ಬಿಟ್ಟು ಬೇರೆ ಯಾವುದೇ ಬಾಷೆಗಳಲ್ಲಿ ನಟನೆ ಮಾಡದೇ ಕನ್ನಡ ನೆಲ, ಜಲ, ಭಾಷೆಯಿಂದಲೇ ಮೇರು ನಟರಾದ ಏಕೈಕ ವ್ಯಕ್ತಿ’ ಎಂದು ಬಣ್ಣಿಸಿದರು.
ದಾಸರಹಳ್ಳಿ ಕ್ಷೇತ್ರ ಘಟಕದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್. ಜಯದೇವ್ ಮಾತನಾಡಿ, ಡಾ.ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಎಂದು ಹೇಳಿದರು.
ಮೆರವಣಿಗೆ: ಬೆಳಿಗ್ಗೆ ನೆಲಮಹೇಶ್ವರಿ ದೇವಸ್ಥಾನದಿಂದ 21 ಕಳಸ ಹೊತ್ತ ಮಹಿಳೆಯರು ತಮಟೆ, ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಮೂಲಕ ಪುತ್ಥಳಿ ಅನಾವರಣದ ಜಾಗಕ್ಕೆ ತಲುಪಿದರು. ಸಂಜೆ ಆಕಾಶ್ ಅವರ ‘ನೃತ್ಯ ಕಲಾ’ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಗಂಧದ ಗುಡಿ ಡಾ. ರಾಜ್ ಪ್ರಶಸ್ತಿ’ ಪುರಸ್ಕಾರ ನೀಡಲಾಯಿತು.
ಸಮಾಜ ಸೇವಕ ಟಿ. ಧರ್ಮೇಶ್ ಗೌಡ, ಸಂಘದ ಅಧ್ಯಕ್ಷ ಪಿ.ನಾಗರಾಜ್, ಟ್ರಸ್ಟ್ ಅಧ್ಯಕ್ಷ ಹನುಮಂತಪ್ಪ ಮೇಡೇಗಾರ, ಬಿಜೆಪಿ ಮುಖಂಡ ಟಿ.ಶಿವಕುಮಾರ್, ಲತಾ ಕುಂದರಗಿ, ರಾಜೇಂದ್ರ ಕೊಣ್ಣೂರ, ಆನಂದ್, ಅಂಬಣ್ಣ ಮೂಡಬಿ, ರಾಮಲಿಂಗಪ್ಪ, ಸಂಘದ ಪದಾಧಿಕಾರಿಗಳು ಹಾಗೂ ಸಾವಿರಾರು ಅಭಿಮಾನಿಗಳು, ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.