ADVERTISEMENT

‘ಇ–ಬುಕ್‌ ಎಂದರೆ ಪಿಡಿಎಫ್‌ ಮಾಡೋದಲ್ಲ’

ಡಿ.27 ರ ಬಳಿಕ ಹೋರಾಟ; ಗ್ರಂಥಾಲಯ ಇಲಾಖೆಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:34 IST
Last Updated 20 ಡಿಸೆಂಬರ್ 2019, 19:34 IST

ಬೆಂಗಳೂರು: ‘ಪುಸ್ತಕಗಳನ್ನು ಪಿಡಿಎಫ್‌ ಮಾಡಿ ಭದ್ರವಾಗಿ ಇಡುವುದನ್ನೇಇ–ಬುಕ್‌ ಎಂದು ಗ್ರಂಥಾಲಯ ಇಲಾಖೆ ಭಾವಿಸಿದಂತಿದೆ. ಇ–ಬುಕ್‌ ವ್ಯವಸ್ಥೆಗೆ ಕಾಲಿಡುವುದಕ್ಕೆ ಮುನ್ನ ಸಾಕಷ್ಟು ತಯಾರಿ ನಡೆಸಿಕೊಳ್ಳಬೇಕಿದ್ದು, ಅದಕ್ಕೆ ಗ್ರಂಥಾಲಯ ಇಲಾಖೆ ತಯಾರಿ ನಡೆಸಿಲ್ಲ’ ಎಂದು ಲೇಖಕ ಹಾಗೂ ಛಂದ ಪ್ರಕಾಶನದ ವಸುಧೇಂದ್ರ ಹೇಳಿದರು.

ತರಾತುರಿಯಲ್ಲಿ ಡಿಜಿಟಲೀಕರಣ ಮತ್ತು ಇ–ಬುಕ್‌ ವ್ಯವಸ್ಥೆ ಜಾರಿ ತರುವ ಗ್ರಂಥಾಲಯ ಇಲಾಖೆ ಕ್ರಮವನ್ನು ವಿರೋಧಿಸಲು ಶುಕ್ರವಾರ ರಾಜ್ಯದ 50 ಕ್ಕೂ ಹೆಚ್ಚು ಪ್ರಕಾಶಕರು ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿಯ
ವರನ್ನು ಭೇಟಿ ಮಾಡಿ ಅಹವಾಲು ಹೇಳಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.

ಇ–ಬುಕ್ ವ್ಯವಸ್ಥೆ ತುಂಬ ಸರಳವಲ್ಲ. ಇದರಲ್ಲಿ ಸಾಕಷ್ಟು ವಿಚಾರಗಳಿವೆ. ಆ ಬಗ್ಗೆ ಗ್ರಂಥಾಲಯ ಇಲಾಖೆಗೆ ಎಷ್ಟರಮಟ್ಟಿಗೆ ಅರಿವು ಇದೆಯೊ ಗೊತ್ತಿಲ್ಲ. ಮೊದಲಿಗೆ ಅದಕ್ಕೊಂದು ನೀತಿ– ನಿಯಮಾವಳಿಗಳನ್ನು ರೂಪಿಸಬೇಕಿತ್ತು. ಅದನ್ನು ಮಾಡದೇ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಲಾಗಿದೆ, ಇದರಿಂದ ಏನು ಸಾಧಿಸುತ್ತಾರೋ ಗೊತ್ತಿಲ್ಲ ಎಂದರು.

ADVERTISEMENT

ಇ–ಬುಕ್‌ ಅನಿವಾರ್ಯ: ‘ಪ್ರಕಾಶಕರು ಇ–ಬುಕ್‌ ವ್ಯವಸ್ಥೆಗೆ ಹೋಗುವುದು ಅನಿವಾರ್ಯ. ನಾವು ವಿರೋಧಿಸುವುದೂ ಇಲ್ಲ. ನಮ್ಮ ಹಲವಾರು ಪ್ರಶ್ನೆಗಳಿಗೆ ಇಲಾಖೆಯ ಉತ್ತರ ಬೇಕಿದೆ. ಯಾವುದೇ ಪುಸ್ತಕವನ್ನು ಇ–ಬುಕ್‌ ರೂಪಕ್ಕೆ ತರಲು ಅದಕ್ಕೆ ಲೇಖಕ ಮತ್ತು ಪ್ರಕಾಶಕರ ಅನುಮತಿ ಪಡೆಯಬೇಕು. ಮಾರಾಟದ ಹಕ್ಕು, ಲೇಖಕರ ರಾಯಲ್ಟಿ, ಪ್ರಕಾಶಕರಿಗೆ ಸಲ್ಲಬೇಕಾದ ಮೊತ್ತದ ಬಗ್ಗೆ ಮಾಹಿತಿ ನೀಡಬೇಕು’ ಎಂದು ವಸುಧೇಂದ್ರ ಒತ್ತಾಯಿಸಿದರು.

27 ರವರೆಗೆ ಗಡುವು: ಗ್ರಂಥಾಲಯ ಇಲಾಖೆ, ಸಚಿವರು ಮತ್ತು ಇಲಾಖೆ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. 27 ರ ಒಳಗೆ ಇಲಾಖೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದೇ ಇದ್ದರೆ, ಕನ್ನಡ ಪ್ರಮುಖ ಸಾಹಿತಿಗಳ ಸಭೆ ಕರೆದು ಹೋರಾಟದ ಹಾದಿ
ಹಿಡಿಯಲು ತೀರ್ಮಾನಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.