ADVERTISEMENT

‘ಕೃತಿಗಳನ್ನು ಯುವಜನರಿಗೆ ತಲುಪಿಸಲು ಇ– ಪುಸ್ತಕ ಸಹಕಾರಿ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 19:51 IST
Last Updated 12 ಡಿಸೆಂಬರ್ 2020, 19:51 IST
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಮಹಾಲಿಂಗೇಶ್ವರ, ರವಿಕುಮಾರ್, ಡಾ. ಲೋಕೇಶ ಅಗಸನಕಟ್ಟೆ ಮತ್ತು ಮುರಳಿ ಅವರಿಗೆ ‘ಮಾಸ್ತಿ ಕಾದಂಬರಿ - ಕಥಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮಾವಿನಕರೆ ರಂಗನಾಥನ್, ರಶ್ಮಿ ಮಹೇಶ್, ಡಾ.ಕೆ. ಸತ್ಯನಾರಾಯಣ ಮತ್ತು ಎಸ್.ಆರ್. ವಿಜಯಶಂಕರ ಇದ್ದಾರೆ - –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಮಹಾಲಿಂಗೇಶ್ವರ, ರವಿಕುಮಾರ್, ಡಾ. ಲೋಕೇಶ ಅಗಸನಕಟ್ಟೆ ಮತ್ತು ಮುರಳಿ ಅವರಿಗೆ ‘ಮಾಸ್ತಿ ಕಾದಂಬರಿ - ಕಥಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮಾವಿನಕರೆ ರಂಗನಾಥನ್, ರಶ್ಮಿ ಮಹೇಶ್, ಡಾ.ಕೆ. ಸತ್ಯನಾರಾಯಣ ಮತ್ತು ಎಸ್.ಆರ್. ವಿಜಯಶಂಕರ ಇದ್ದಾರೆ - –ಪ್ರಜಾವಾಣಿ ಚಿತ್ರ   

ಬೆಂಗಳೂರು: ‌‘ಕನ್ನಡದ ಹಳೆಯ ಕೃತಿಗಳುಯುವಪೀಳಿಗೆಗೆ ಸುಲಭವಾಗಿ ದೊರೆಯುವಂತೆ ಮಾಡಲು ಅವುಗಳನ್ನು ಇ ಪುಸ್ತಕ ಅಥವಾ ಆಡಿಯೊ ಪುಸ್ತಕಗಳ ರೂಪದಲ್ಲಿ ಹೊರತರಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಶ್ಮಿ ಮಹೇಶ್ ತಿಳಿಸಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ 129ನೇ ಜನ್ಮ ದಿನಾಚರಣೆ ಪ್ರಯುಕ್ತ ಮಾಸ್ತಿ ವೆಂಕಟೇಶ ಅಯ್ಯಂಗಾರ ಟ್ರಸ್ಟ್ ನಗರದಲ್ಲಿ ಶನಿವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಶ್ರೀಧರ ಬಳಗಾರ ಅವರ ‘ಮೃಗಶಿರ’ ಕೃತಿ ಹಾಗೂ ಡಾ. ಲೋಕೇಶ ಅಗಸನಕಟ್ಟೆ ಅವರ ‘ಮೀಸೆ ಹೆಂಗಸು ಮತ್ತು ಇತರ ಕಥೆಗಳು’ ಕೃತಿಗೆ ಮಾಸ್ತಿ ಪುರಸ್ಕಾರ ಪ್ರದಾನ ಮಾಡಿದರು. ವಸಂತ ಪ್ರಕಾಶನ ಹೊರತಂದ ಕೆ. ಸತ್ಯನಾರಾಯಣ ಅವರ ‘ಮಾಸ್ತಿ’ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಎಸ್.ಆರ್. ವಿಜಯಶಂಕರ ಅವರ ‘ಮಾಸ್ತಿ ವೆಂಕಟೇಶ ಅಯ್ಯಂಗಾರ’ ಕೃತಿಯನ್ನು ಬಿಡುಗಡೆ ಮಾಡಿದರು.

‘ಪಠ್ಯದ ಜತೆಗೆ ಕನ್ನಡದ ಸಾಹಿತ್ಯ ಕೃತಿಗಳನ್ನೂ ಮಕ್ಕಳು ಓದುವಂತಾಗಬೇಕು. ಕನ್ನಡದ ಬೆಳವಣಿಗೆಗೆ ಇರುವ 23 ಪ್ರತಿಷ್ಠಾನಗಳು, 4 ಪ್ರಾಧಿಕಾರಗಳು ಹಾಗೂ 13 ಅಕಾಡೆಮಿಗಳು ಸೃಜನಾತ್ಮಕ ಯೋಜನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಪಸರಿಸುವ ಕೆಲಸ ಮಾಡಬೇಕು. ಕೇವಲ ವೇದಿಕೆಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಭಾಷೆ ಮತ್ತು ಸಂಸ್ಕೃತಿ ವೃದ್ಧಿಸದು. ಜನಸಾಮಾನ್ಯರನ್ನು ತಲಪುವಂತಹ ಚಟುವಟಿಕೆ ಹಮ್ಮಿಕೊಳ್ಳಬೇಕು. ಇದಕ್ಕೆ ಇಲಾಖೆ ಸಹಕಾರ ನೀಡಲಿದೆ’ ಎಂದು ರಶ್ಮಿ ಮಹೇಶ್ ಭರವಸೆ ನೀಡಿದರು.

ADVERTISEMENT

ಕಥೆಗಾರ ಡಾ. ಲೋಕೇಶ್ ಅಗಸನಕಟ್ಟೆ, ‘ಕಥೆಗಾರರು ಕಥನದ ಆಕೃತಿಗಳನ್ನು ಕಟ್ಟುವಾಗ ಪರಂಪರೆಯ ಮೂಲಸತ್ವಗಳನ್ನು ಮತ್ತೆ ಮತ್ತೆ ಕಟ್ಟುತ್ತಾರೆ. ಕನ್ನಡ ಕಥಾ ಸಾಹಿತ್ಯಕ್ಕೆ ಮಾಸ್ತಿ ಅವರು ನೀಡಿದ ಕೊಡುಗೆಯು ಇಂದಿನ ಕಥೆಗಾರರಿಗೂ ಸ್ಫೂರ್ತಿ. ಕಥೆಗಾರರು ಹಾಗೂ ಬರಹಗಾರರ ಮೇಲೆ ಪ್ರಭಾವ ಬೀರುವಂತಹ ಸಾಮರ್ಥ್ಯ ಮಾಸ್ತಿ ಸಾಹಿತ್ಯಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.