ADVERTISEMENT

ಬೆಂಗಳೂರು: ಗ್ರಹಣ ಕಣ್ತುಂಬಿಕೊಂಡ ಜನ

ಜನ ಸಂಚಾರ ವಿರಳ *ಬಿಕೋ ಎನ್ನುತ್ತಿದ್ದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 19:58 IST
Last Updated 21 ಜೂನ್ 2020, 19:58 IST
ಜವಾಹರಲಾಲ್ ನೆಹರೂ ತಾರಾಲಯದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಿಸುತ್ತಿರುವ ಖಗೋಳಾಸಕ್ತರು -–ಪ್ರಜಾವಾಣಿ ಚಿತ್ರ
ಜವಾಹರಲಾಲ್ ನೆಹರೂ ತಾರಾಲಯದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಿಸುತ್ತಿರುವ ಖಗೋಳಾಸಕ್ತರು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಮೋಡ ಕವಿದ ವಾತಾವರಣದ ನಡುವೆ ಭಾನುವಾರಬೆಳಿಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಬಹುತೇಕರು ಸೌರ ಕನ್ನಡಕಗಳನ್ನು ಬಳಸಿ, ಮನೆಗಳಲ್ಲೇ ಗ್ರಹಣ ವೀಕ್ಷಿಸಿದರು.

ಗ್ರಹಣದ ಕಾರಣ ಜನ ಮನೆಯಿಂದ ಹೊರ ಬರಲಿಲ್ಲ. ಕೆಲವೆಡೆ ಹೋಟೆಲ್‍ಗಳು ತೆರೆದಿದ್ದರೂ ಭಣಗುಡುತ್ತಿದ್ದವು.

ಆನ್‍ಲೈನ್‍ನಲ್ಲಿ ವೀಕ್ಷಣೆಗೆ ವ್ಯವಸ್ಥೆ :ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಕೆಲವೇ ಮಂದಿಗೆ ಮಾತ್ರ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಸಿಲೊಸ್ಟ್ಯಾಟ್ ಉಪಕರಣದ ಮೂಲಕ ಗ್ರಹಣ ಸೆರೆಹಿಡಿದು, ತಾರಾಲಯದ ವೆಬ್‍ಸೈಟ್ ಮೂಲಕ ಫೇಸ್‍ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್‍ನಲ್ಲಿ ನೇರಪ್ರಸಾರ ಮಾಡಲಾಯಿತು. 15 ಸಾವಿರಕ್ಕೂ ಹೆಚ್ಚು ಮಂದಿ ನೇರಪ್ರಸಾರ ವೀಕ್ಷಿಸಿದರು.

ADVERTISEMENT

‘ಬೆಂಗಳೂರಿನಲ್ಲಿ ಶೇ 37ರಷ್ಟು ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿತು. ಮಧ್ಯಾಹ್ನ 12.47ಕ್ಕೆ ಗ್ರಹಣದ ತೀವ್ರತೆ ಹೆಚ್ಚು ಇತ್ತು' ಎಂದು ತಾರಾಲಯದ ನಿರ್ದೇಶಕ ಡಾ. ಪ್ರಮೋದ್ ಗಲಗಲಿ ತಿಳಿಸಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ರಾಜ್ಯ ನಡಿಗೆದಾರರ ಒಕ್ಕೂಟ ಸಹಯೋಗದಲ್ಲಿ ಲಾಲ್‌ಬಾಗ್‌ ಉದ್ಯಾನದ ಬಂಡೆ ಮೇಲೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

‘ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ವರ್ಷವಿದು. ಹಾಗಾಗಿ ಗ್ರಹಣದ ವೇಳೆ ಆಹಾರ ಸೇವನೆ ನಿಷಿದ್ಧ ಎಂಬ ಮೂಢನಂಬಿಕೆ ತೊಲಗಿಸಲು ನರಸಿಂಹಯ್ಯ ಅವರಿಗೆ ಪ್ರಿಯವಾದ ಉಪ್ಪಿಟ್ಟು ಹಾಗೂ ಮಂಡಕ್ಕಿ ಸೇವಿಸಿದೆವು’ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಸಿ.ಕೆ.ರವಿಚಂದ್ರತಿಳಿಸಿದರು.

ಮೂಢ ನಂಬಿಕೆ ವಿರೋಧಿ ಒಕ್ಕೂಟದ ಸದಸ್ಯರು ನಗರದ ಮೌರ್ಯ ವೃತ್ತದಲ್ಲಿ ಗ್ರಹಣದ ವೇಳೆ ಆಹಾರ ಸೇವಿಸಿದರು. ಭಕ್ತಾರಾಂ ಹಾಗೂ ಜಗದೀಶ್ ಅವರು ಮೂಢನಂಬಿಕೆ ವಿರೋಧಿ ಗೀತೆಗಳನ್ನು ಹಾಡಿದರು. ಬ್ರೇಕ್‍ಥ್ರೋ ಸೈನ್ಸ್ ಸೊಸೈಟಿಯ (ಬಿಎಸ್‍ಎಸ್) ಸದಸ್ಯರು ಮನೆಗಳಲ್ಲೇ ಸೌರಕನ್ನಡಕ ಧರಿಸಿ ಗ್ರಹಣ ನೋಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.