ADVERTISEMENT

ಮೊಟ್ಟೆ ಎಸೆತ: ಮೂವರು ‘ಕೈ’ ಕಾರ್ಯಕರ್ತರ ಸೆರೆ, ಬಿಡುಗಡೆ

ಕೆ.ಸಿ. ಜನರಲ್‌ ಆಸ್ಪತ್ರೆಯಿಂದ ಶಾಸಕ ಮುನಿರತ್ನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 15:57 IST
Last Updated 26 ಡಿಸೆಂಬರ್ 2024, 15:57 IST
ಮುನಿರತ್ನ 
ಮುನಿರತ್ನ    

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣದಲ್ಲಿ ನಂದಿನಿಲೇಔಟ್‌ ಠಾಣೆ ಪೊಲೀಸರು ಗುರುವಾರ ಮೂವರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಮೊಟ್ಟೆ ಎಸೆದ ಆರೋಪದಡಿ ಲಗ್ಗೆರೆಯ ಬೈರವೇಶ್ವರನಗರದ ಕೆ.ವಿಶ್ವಮೂರ್ತಿ, ಪಾಪರೆಡ್ಡಿ ಪಾಳ್ಯದ ವಿಶ್ವಕಿರಣ್ ಹಾಗೂ ಲಗ್ಗೆರೆ ನಿವಾಸಿ ಅಶೋಕ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಲಕ್ಷ್ಮಿದೇವಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್‌ ಬರುತ್ತಿದ್ದ ವೇಳೆ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ADVERTISEMENT

‘ಕೆಲವು ಸಾಕ್ಷ್ಯಗಳು ಲಭಿಸಿದ್ದರಿಂದ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಮೂವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಪ್ರಕರಣದಲ್ಲಿ ವಿಧಿಸಬಹುದಾದ ಶಿಕ್ಷೆ ಪ್ರಮಾಣ ಕಡಿಮೆಯಿದ್ದು, ಮೂವರಿಗೂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಗುರುವಾರ ಸಂಜೆ ಅವರನ್ನು ಬಿಡುಗಡೆ ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದರು.

ಕೃತ್ಯ ನಡೆದ ಸ್ಥಳ ಹಾಗೂ ಲಕ್ಷ್ಮಿದೇವಿ ನಗರದ ಬಿಜೆಪಿ ಕಚೇರಿಯಲ್ಲಿ ನಂದಿನಿ ಲೇಔಟ್‌ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿದರು. ಸ್ಥಳಕ್ಕೆ ತಾಂತ್ರಿಕ ತಜ್ಞರು ಭೇಟಿ ನೀಡಿ ಮಾದರಿ ಸಂಗ್ರಹಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಘಟನೆಯ ಬಳಿಕ ಮುನಿರತ್ನ ಅವರು ಮಲ್ಲೇಶ್ವರ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿ ಮನೆಗೆ ತೆರಳಿದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮುನಿರತ್ನ ಬೆಂಬಲಿಗರ ವಿರುದ್ಧವೂ ದೂರು

ಮುನಿರತ್ನ ಬೆಂಬಲಿಗರ ವಿರುದ್ದವೂ ಕೆ.ವಿಶ್ವಮೂರ್ತಿ ಅವರು ದೂರು ನೀಡಿದ್ದು ನಂದಿನಿಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ‘ಡಿ.25ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಲಕ್ಷ್ಮಿದೇವಿ ನಗರದ ಹೊರವರ್ತುಲ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಮುನಿರತ್ನ ಬೆಂಬಲಿಗರು ಹಲ್ಲೆ ನಡೆಸಿದರು. ಶಾಸಕರ ವಿರುದ್ಧ ಪ್ರತಿಭಟನೆ ಮಾಡುತ್ತೀಯಾ ಎಂದು ಬೆದರಿಸಿ ಥಳಿಸಿದರು. ಪೊಲೀಸರೇ ರಕ್ಷಿಸಿ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿದ್ದರು. ಶಾಸಕರ 15 ಮಂದಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ’ ಎಂದು ವಿಶ್ವಮೂರ್ತಿ ದೂರು ನೀಡಿದ್ದಾರೆ.

‘ಕಾರಿಗೆ ಬೆಂಕಿ ಹಾಕಿ ಸುಡುವ ಬೆದರಿಕೆ’

‘ಈ ಹಿಂದೆಯೇ ನನಗೆ ಬಂದಿದ್ದ ಮಾಹಿತಿಯಂತೆಯೇ ಆ್ಯಸಿಡ್‌ ತುಂಬಿದ್ದ ಮೊಟ್ಟೆ ಎಸೆಯಲಾಯಿತು. ತಲೆಗೆ ಪೆಟ್ಟು ಬಿದ್ದು ಊತ ಬಂದಿದೆ. ಕೂದಲು ಸಹ ಕಿತ್ತು ಬಂದಿದೆ. ನನ್ನ ಮೇಲೆ ದಾಳಿಗೆ 150 ಮಂದಿ ಬಂದಿದ್ದರು’ ಎಂದು ಆರೋಪಿಸಿ ಮುನಿರತ್ನ ನೀಡಿದ ದೂರು ಆಧರಿಸಿ ನಂದಿನಿಲೇಔಟ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಅಕ್ಟೋಬರ್ 22ರಂದು ರಾಜ್ಯಪಾಲರನ್ನು ಭೇಟಿಯಾಗಿ ನನ್ನನ್ನು ಕೊಲೆ ಮಾಡಲು ಸಂಚು ನಡೆಯುತ್ತಿದ್ದು ಅಂಗರಕ್ಷಕರನ್ನು ಒದಗೊಸುವಂತೆ ಸರ್ಕಾರ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದೆ. ನ.1ರಂದು ರಾಜ್ಯ ಗುಪ್ತಚರ ವಿಭಾಗಕ್ಕೂ ಪತ್ರ ಬರೆದು ಗನ್‌ಮ್ಯಾನ್‌ ನೀಡುವಂತೆ ಕೋರಿಕೆ ಸಲ್ಲಿಸಿದ್ದೆ. ಆದರೂ ಗನ್‌ಮ್ಯಾನ್ ನಿಯೋಜಿಸಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಡಿ.5ರಂದು ಇಬ್ಬರು ವಕೀಲರೆಂದು ಹೇಳಿಕೊಂಡು ಬಂದು ‘ಈಗಲೂ ಕಾಲ ಮಿಂಚಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸು. ಇಲ್ಲದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ನಮ್ಮ ಅಣ್ಣ ಡಿ.ಕೆ.ಸುರೇಶ್‌ ಸಂತೋಷವಾಗಿರಬೇಕು. ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಣ್ಣನನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿರುವೆ. ಅಣ್ಣ ಬಹಳ ನೊಂದಿದ್ದಾರೆ. ರಾಜೀನಾಮೆ ನೀಡಿದರೆ ಜೀವ ಉಳಿಯುತ್ತದೆ ಎಂಬುದಾಗಿಯೂ ಬೆದರಿಕೆ ಹಾಕಿದ್ದರು’ ಎಂದು ಶಾಸಕರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

‘ರಾಜೀನಾಮೆ ನೀಡದಿದ್ದರೆ ಬಟ್ಟೆ ಹರಿದು ಹಾಕುತ್ತೇವೆ. ಆ್ಯಸಿಡ್‌ ತುಂಬಿದ ಮೊಟ್ಟೆ ಎಸೆಯುತ್ತೇವೆ. ಕಾರಿಗೆ ಬೆಂಕಿ ಹಾಕುತ್ತೇವೆ. ಈ ಕೃತ್ಯಗಳು ನಡೆಯುವುದಕ್ಕೂ ಮೊದಲು ರಾಜೀನಾಮೆ ಸಲ್ಲಿಸುವಂತೆ ವಕೀಲರ ವೇಷದಲ್ಲಿ ಬಂದಿದ್ದವರು ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ. ‘ಬೆದರಿಕೆ ಸಂಬಂಧ ರಾಷ್ಟ್ರಪತಿ ಪ್ರಧಾನಿ ಮಾನವ ಹಕ್ಕುಗಳ ಆಯೋಗ ಸಿಬಿಐ ಎನ್‌ಐಎ ಹಾಗೂ ಇ.ಡಿಗೆ ದೂರು ನೀಡಿದ್ದೇನೆ’ ಎಂದು ದೂರಿನ ಪ್ರತಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.