ಬೆಂಗಳೂರು: ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ವಿದ್ಯುತ್ ತಗುಲಿ ಎಂಜಿನಿಯರ್ ಚಂದ್ರಶೇಖರ್ (26) ಎಂಬುವರು ಮೃತಪಟ್ಟಿದ್ದಾರೆ.
ಚಿತ್ರದುರ್ಗದ ಚಂದ್ರಶೇಖರ್, ವರ್ಷದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ವಿದ್ಯುತ್ ನಿರ್ವಹಣಾ ವಿಭಾಗದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಎಂದಿನಂತೆ ಸೋಮವಾರ ರಾತ್ರಿ ಕಂಪನಿ ಕಚೇರಿಗೆ ಬಂದಿದ್ದ ಚಂದ್ರಶೇಖರ್, ಕೆಲಸದಲ್ಲಿ ತೊಡಗಿದ್ದರು. ಅದೇ ವೇಳೆಯೇ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
‘ಮೃತನ ಪೋಷಕರ ದೂರು ಆಧರಿಸಿ ಕಂಪನಿ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಆಫ್ರಿಕಾ ಪ್ರಜೆಗಳಿಂದ ಹಲ್ಲೆ
ಬೆಂಗಳೂರು: ಕಾರಿನಲ್ಲಿ ಬಂದು ಬೈಕ್ಗೆ ಡಿಕ್ಕಿ ಹೊಡೆದ ಮೂವರು ಆಫ್ರಿಕಾ ಪ್ರಜೆಗಳ ವರ್ತನೆಯನ್ನು ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಈ ಬಗ್ಗೆ ನರೇಶ್ (21) ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ರಾತ್ರಿ 8ರ ಸುಮಾರಿಗೆ ತಾವು ಬೈಕ್ನಲ್ಲಿ ಎಚ್ಆರ್ಬಿಆರ್ ಬಡಾವಣೆಯಲ್ಲಿರುವ ಮನೆಗೆ ಹೊರಟಿದ್ದಾಗ ವೇಗವಾಗಿ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ನಿಲ್ಲದೆ ಪರಾರಿಯಾಯಿತು.
ಕಾರು ಬೆನ್ನತ್ತಿ ಅಡ್ಡಗಟ್ಟಿದ ನರೇಶ್ ಗೆ ಹಲ್ಲೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ. ನರೇಶ್ ಅವರ ತಲೆ ಹಾಗೂ ಕಿವಿಗೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ನರೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನರೇಶ್ ಸ್ನೇಹಿತರು ಆರೋಪಿಗಳನ್ನು ಹಿಡಿಯಲು ವಿಫಲ ಯತ್ನ ನಡೆಸಿದರು. ತಪ್ಪಿಸಿಕೊಳ್ಳಲು ಆರೋಪಿಗಳು ಕಾರನ್ನು ಬಿಟ್ಟು ಓಡಿಹೋದರು. ಆರೋಪಿಗಳ ಸುಳಿವು ಸಿಕ್ಕಿದ್ದು, ಬಂಧಿಸಲು ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.