ಬೆಂಗಳೂರು: ನಗರದ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಸಿಐಟಿ) ಆಯೋಜಿಸಿದ್ದ 15ನೇ ಪದವಿ ಪ್ರದಾನ ಸಮಾರಂಭದಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ ಮತ್ತು ಪಿಎಚ್.ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಪದವಿ ಪ್ರದಾನ ಮಾಡಿ ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಮಾಜಿ ನಿರ್ದೇಶಕ ಪಿ.ಬಲರಾಮ್, ತಮ್ಮ ವೃತ್ತಿ ಜೀವನ ಮತ್ತು ಸಂಶೋಧನೆಗಳ ಒಳನೋಟವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಮೈಕ್ರೊಸಾಫ್ಟ್ ರಿಸರ್ಚ್ ಇಂಡಿಯಾದ, ಹಿರಿಯ ಪ್ರಧಾನ ಸಂಶೋಧಕ ಸ್ವಾಮಿ ಮನೋಹರ್ ಅವರು ಶಿಕ್ಷಣದ ಉದ್ದೇಶ, ಮಾನವನ ಮಿದುಳಿನ ವಿಕಾಸವನ್ನು ವಿವರಿಸಿದರು. ಯಶಸ್ವಿ ಜೀವನ ಮತ್ತು ವೃತ್ತಿಜೀವನವನ್ನು ರೂಪಿಸುವಲ್ಲಿ ಅರಿವಿನ ಮೌಲ್ಯ, ಸ್ಥಿತಿಸ್ಥಾಪಕತ್ವ ಮತ್ತು ಕಲ್ಪನೆಯ ಮಹತ್ವವನ್ನು ಒತ್ತಿ ಹೇಳಿದರು.
ಎಆರ್ಎಂ ಎಂಬೆಡೆಡ್ ಟೆಕ್ನಾಲಜೀಸ್ನ ಎಕೊಸಿಸ್ಟಮ್ ಅಲಯನ್ಸೆಸ್ನ ಪ್ರಾದೇಶಿಕ ಮುಖ್ಯಸ್ಥ ಸುಮೀತ್ ವರ್ಮ ಉದ್ಯಮಶೀಲತೆಯಲ್ಲಿ ಎಂಜಿನಿಯರ್ಗಳ ನಿರ್ಣಾಯಕ ಪಾತ್ರವನ್ನು ವಿವರಿಸಿದರು. ಯಶಸ್ವಿ ಜೀವನ ರೂಪಿಸುವ ಮತ್ತು ನಿರ್ವಹಿಸುವ ಕುರಿತು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದರು. ಸಿಐಟಿ ಅಧ್ಯಕ್ಷ ಡಿ.ಕೆ.ಮೋಹನ್, ಪ್ರಾಚಾರ್ಯೆ ಇಂದುಮತಿ ಮತ್ತು ಕಾಲೇಜಿನ ಸಿಬ್ಬಂದಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.