ADVERTISEMENT

ಇಪಿಎಸ್‌–95 ನಿವೃತ್ತ ನೌಕರರ ಸಮಾವೇಶ

ದಾವಣಗೆರೆಯಲ್ಲಿ ಶನಿವಾರ, ಮಂಡ್ಯದಲ್ಲಿ ಭಾನುವಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:40 IST
Last Updated 24 ನವೆಂಬರ್ 2022, 5:40 IST

ಬೆಂಗಳೂರು: 1995 ರ ನೌಕರರ ಪಿಂಚಣಿ ಯೋಜನೆಯ(ಇಪಿಎಸ್-95) ನಿವೃತ್ತ ನೌಕರರ ಪ್ರತಿಭಟನಾ ಸಮಾವೇಶ ದಾವಣಗೆರೆ ಮತ್ತು ಮಂಡ್ಯದಲ್ಲಿ ಕ್ರಮವಾಗಿ ನ.26 ಮತ್ತು 27ರಂದು ನಡೆಯಲಿದೆ.

ರಾಷ್ಟ್ರೀಯ ಸಂಘರ್ಷ ಸಮಿತಿ(ಎನ್‌ಎಸಿ) ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಪಿಂಚಣಿ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ವಿಶ್ಲೇಷಣೆ, ಕನಿಷ್ಠ ಪಿಂಚಣಿ ₹7,500 ಮತ್ತು ಡಿ.ಎ(ತುಟ್ಟಿಭತ್ಯೆ), ವೈದ್ಯಕೀಯ ಸೌಲಭ್ಯ, ಪಿಂಚಣಿ ವಂಚಿತರಿಗೆ ಕನಿಷ್ಠ ₹5 ಸಾವಿರ ‍ಪಿಂಚಣಿ ನೀಡುವ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆಗಳು ನಡೆಯಲಿವೆ ಎಂದು ಎನ್‌ಎಸಿ ತಿಳಿಸಿದೆ.

‘ನೌಕರರ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್ಒ) ಸಲ್ಲದ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ಉದ್ದೇಶಪೂರ್ವಕವಾಗಿ ದಾಖಲಿಸಿ ಲಕ್ಷಾಂತರ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಅದೆಷ್ಟೋ ನೌಕರರು ಮತ್ತು ನಿವೃತ್ತ ನೌಕರರು ಇಂದಿಗೂ ಇಪಿಎಫ್‌ಒ ನಡೆಯನ್ನು ಶಪಿಸುತ್ತಿದ್ದಾರೆ. ಅಡ್ಡ ಕಾನೂನು ಬಳಸಿ ಪಿಂಚಣಿದಾರರನ್ನು ಬೆದರಿಸಲು ಸಾಧ್ಯವಿಲ್ಲ. ಎಲ್ಲರಿಗೂ ಪಿಂಚಣಿ ಸೌಲಭ್ಯ ದೊರಕಬೇಕು. ಅಲ್ಲಿಯ ತನಕ ಹೋರಾಟ ನಿಲ್ಲುವುದಿಲ್ಲ’ ಎಂದು ಎನ್‌ಎಸಿ ಹೇಳಿದೆ.

ADVERTISEMENT

ಈ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಮಾವೇಶ ನಡೆಸಲಾಗುತ್ತಿದ್ದು, ಎನ್‌ಎಸಿ ಅಧ್ಯಕ್ಷ ಕಮಾಂಡರ್ ಅಶೋಕ್‌ ರಾವ್, ಕಾರ್ಯದರ್ಶಿ ನರೇಂದ್ರ ಸಿಂಗ್ ಭಾಗವಹಿಸಲಿದ್ದಾರೆ. ದಾವಣಗೆರೆಯಲ್ಲಿ ರೈಲು ನಿಲ್ದಾಣದ ಬಳಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾದಲ್ಲಿ, ಮಂಡ್ಯದಲ್ಲಿ ಆರ್‌ಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ನಡೆಯಲಿದೆ. ಇಪಿಎಸ್-95 ವ್ಯಾಪ್ತಿಗೆ ಬರುವ ನಿವೃತ್ತ ನೌಕರರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.