ಯಲಹಂಕ: ‘ಇಡೀ ಕೇಂದ್ರ ಸರ್ಕಾರವೇ ಬಂದು ನಿಂತುಕೊಂಡರೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ’ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಹವಾ ಇದೆ. ಸರ್ಕಾರದ ಐದು ಗ್ಯಾರಂಟಿಗಳು ಕೆಲಸ ಮಾಡಲಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಶಾಸಕರ ಆದಿಯಾಗಿ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ’ ಎಂದರು.
ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ‘ಈ ಚುನಾವಣೆ ನಮ್ಮ ರಾಜ್ಯ ಮತ್ತು ದೇಶಕ್ಕೆ ಬಹಳ ಮಹತ್ವವಾದ ಚುನಾವಣೆ. ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುವ ಸಲುವಾಗಿ ಚುನಾವಣೆ ಎದುರಿಸಲು ಬರುತ್ತಿದ್ದಾರೆ. ಇಂತಹವರಿಂದ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯವೇ? ಎಂಬುದರ ಬಗ್ಗೆ ಜನರು ಎಚ್ಚರದಿಂದಿರಬೇಕು. ಒಗ್ಗಟ್ಟಿನಲ್ಲಿ ಶಕ್ತಿಯಿದ್ದು, ಯಲಹಂಕದಲ್ಲಿ ಈ ಬಾರಿ ಯುವಕರ ಮತ್ತು ಮಹಿಳಾ ಶಕ್ತಿಯು ಕಾಂಗ್ರೆಸ್ಗೆ ಶಕ್ತಿ ತುಂಬುವ ಕೆಲಸ ಮಾಡಲಿದೆ ಎಂಬ ವಿಶ್ವಾಸವಿದೆ’ ಎಂದರು.
ಮಾಜಿ ಶಾಸಕ ಬಿ.ಪ್ರಸನ್ನಕುಮಾರ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜಿದ್, ಕಾಂಗ್ರೆಸ್ ಮುಖಂಡರಾದ ಎಂ.ಎನ್.ಗೋಪಾಲಕೃಷ್ಣ, ಕೇಶವ ಬಿ.ಬಿ.ರಾಜಣ್ಣ, ವೈ.ಆರ್.ಶ್ರೀಧರ್, ಎನ್.ಎಂ.ಶ್ರೀನಿವಾಸ್, ವಿ.ಜಿ.ಜಯರಾಮಯ್ಯ, ನಾಗರಾಜಗೌಡ, ಅದ್ದೆ ಮಂಜುನಾಥ್, ಎನ್.ತಿಮ್ಮರಾಜು, ಕೋಗಿಲು ವೆಂಕಟೇಶ್, ಲಾವಣ್ಯ ನರಸಿಂಹಮೂರ್ತಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಟೀಫನ್ ಕುಂಡುಕುಳಂ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.