ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 19ರಂದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರ ಅನುಕೂಲಕ್ಕಾಗಿ ‘ನಮ್ಮ ಮೆಟ್ರೊ’ ರೈಲು ನಿಗಮವು ಹೆಚ್ಚುವರಿ ಸೇವೆ ಒದಗಿಸಲಿದೆ.
ಕಬ್ಬನ್ ಉದ್ಯಾನದಿಂದ ಬೈಯಪ್ಪನಹಳ್ಳಿ ಕಡೆಗೆಅಂದು ಕೊನೆಯ ರೈಲು ಮಧ್ಯರಾತ್ರಿ 12.06ಕ್ಕೆ, ಮೈಸೂರು ರಸ್ತೆಯ ಕಡೆಗೆ ರಾತ್ರಿ ಕೊನೆಯ ರೈಲು ತಡರಾತ್ರಿ 11.50ಕ್ಕೆ ನಿರ್ಗಮಿಸಲಿದೆ. ಕಬ್ಬನ್ ಉದ್ಯಾನದಿಂದ ನಾಗಸಂದ್ರ ಹಾಗೂ ಯಲಚೇನಹಳ್ಳಿ ನಿಲ್ದಾಣದ ಕಡೆಗೆ ತೆರಳುವವರ ಅನುಕೂಲಕ್ಕಾಗಿ ಮೆಜೆಸ್ಟಿಕ್ ಇಂಟರ್
ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ಮಧ್ಯರಾತ್ರಿ 12ಕ್ಕೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ತಿಳಿಸಿದೆ.
ಕಬ್ಬನ್ ಉದ್ಯಾನದಿಂದ ಯಾವುದೇ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣ ದರ ₹50 ಇರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪೇಪರ್ ಟಿಕೆಟ್ ಪರಿಚಯಿಸಿದ್ದು, ಪಂದ್ಯ ಆರಂಭಕ್ಕೂ ಮುನ್ನ ಅಂದರೆ 19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಯಾವುದೇ ಮೆಟ್ರೊ ನಿಲ್ದಾಣದಲ್ಲಿ ಈ ಕಾಗದದ ಟಿಕೆಟ್ ಖರೀದಿಸಬಹುದು. ಕಬ್ಬನ್ ಉದ್ಯಾನ ನಿಲ್ದಾಣದಲ್ಲಿ ತಡರಾತ್ರಿ 11.45ರವರೆಗೂ ಈ ಮಾದರಿಯ ಟಿಕೆಟ್ ವಿತರಣೆ ಆಗಲಿದೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಎಂದಿನಂತೆ ಚಾಲ್ತಿಯಲ್ಲಿರುವ ರಿಯಾಯಿತಿ ದರ ಅನ್ವಯ ಆಗಲಿದೆ ಎಂದು ನಿಗಮ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.