
ಬೆಂಗಳೂರು: ‘ಪ್ರಪಂಚದಲ್ಲಿ ಅಂಧರಿಗೆ ದೃಷ್ಟಿ ಸಿಗುವಂತೆ ಮಾಡುವ ನೇತ್ರದಾನವು ಶ್ರೇಷ್ಠದಾನಗಳಲ್ಲಿ ಒಂದು’ ಎಂದು ಬೆಂಗಳೂರಿನ ದಿ ಪ್ರಾಜೆಕ್ಟ್ ವಿಷನ್ ಸಂಸ್ಥಾಪಕ ನಿರ್ದೇಶಕ ಡಾ. ಜಾರ್ಜ್ ಕಣ್ಣಂದನಮ್ ಹೇಳಿದರು.
ನಗರದ ಕೆ. ನಾರಾಯಣಪುರಲ್ಲಿರುವ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಜಯಂತಿಯನ್ ಸೇವಾ ವಿಸ್ತರಣೆ ಕೇಂದ್ರ ಹಾಗೂ ದಿ ಪ್ರಾಜೆಕ್ಟ್ ವಿಷನ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಣ್ಣಿನ ಆರೋಗ್ಯ, ಅಂಧರಿಗೆ ದಾರಿದೀಪ ಹಾಗೂ ‘ದಿವ್ಯಾಂಗಾನುಭವ ನಡಿಗೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಗತ್ತಿನಾದ್ಯಂತ 39 ದಶಲಕ್ಷ ಅಂಧರಿದ್ದಾರೆ. ಅವರಲ್ಲಿ ಶೇ 20ರಷ್ಟು ಮಂದಿ ಕಾರ್ನಿಯಲ್ ಕಸಿ ಚಿಕಿತ್ಸೆಯ ಸಹಾಯ ಪಡೆದರೆ ದೃಷ್ಟಿ ಸಿಗಲಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಭಾರತದಲ್ಲೇ ವಿಶ್ವದ ಅತಿ ಹೆಚ್ಚು ಸಂಖ್ಯೆಯ ಅಂಧರಿದ್ದಾರೆ. ಅವರಿಗೆ ಕಾರ್ನಿಯಲ್ ಕಸಿ ಮೂಲಕ ದೃಷ್ಟಿ ನೀಡಿ ದಾರಿದೀಪವಾಗಬಹುದು. ಇದನ್ನು ನೇತ್ರದಾನದ ಮೂಲಕ ಮಾತ್ರ ಸಾಧಿಸಲು ಸಾಧ್ಯ’ ಎಂದು ತಿಳಿಸಿದರು.
ಕ್ರಿಸ್ತು ಜಯಂತಿ ಡೀಮ್ಡ್ ವಿವಿಯ ಉಪಕುಲಪತಿ ಫಾದರ್ ಡಾ.ಅಗಸ್ಟಿನ್ ಜಾರ್ಜ್ ಮಾತನಾಡಿ, ‘ಮೂರು ವರ್ಷದಲ್ಲಿ ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ದಿವ್ಯಾಂಗಾನುಭವ ನಡಿಗೆ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, 40 ಸಾವಿರಕ್ಕೂ ಹೆಚ್ಚು ಜನರನ್ನು ತಲುಪಲಾಗಿದೆ’ ಎಂದರು.
2022ರ ದಿವ್ಯಾಂಗ್ ಬಾಲಿಕಾ ಪ್ರಶಸ್ತಿ ಪುರಸ್ಕೃತ ಫಾತಿಮಾ ಅನ್ಷಿ ವಿದ್ಯಾರ್ಥಿಗಳು ದೃಷ್ಟಿಗೆ ನೀಡಬೇಕಾದ ಕಾಳಜಿ ಕುರಿತು ಮಾಹಿತಿ ನೀಡಿದರು.
ಕ್ರಿಸ್ತು ಜಯಂತಿ ಡೀಮ್ಡ್ ವಿವಿಯ ಜಯಂತಿಯನ್ ಸೇವಾ ವಿಸ್ತರಣೆ ಕೇಂದ್ರದ ನಿರ್ದೇಶಕ ಜೈಸ್ ವಿ.ಥಾಮಸ್ ಕಾರ್ಯಕ್ರಮ ಉದ್ಘಾಟಿಸಿದರು. ಕೇಂದ್ರದ ಸಂಯೋಜಕ ಶ್ರೀಧರ್ ಪಿ.ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.