ಬೆಂಗಳೂರು: ಇಂಗ್ಲೆಂಡ್ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ, ನೇಪಾಳದ ರಾಕೇಶ್ ಯಾದವ್ ಎಂಬುವರನ್ನು ನಗರಕ್ಕೆ ಕರೆಸಿಕೊಂಡು ₹2.30 ಲಕ್ಷ ಪಡೆದು ವಂಚಿಸಿರುವ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದ ರಣವೀರ್ ಸಿಂಗ್ ಹಾಗೂ ಆತನ ಸಹಚರ ನನ್ನನ್ನು ವಂಚಿಸಿದ್ದಾರೆ. ತಲೆಮರೆಸಿಕೊಂಡಿರುವ ಅವರಿಬ್ಬರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಿ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ರಾಕೇಶ್ ಹೇಳಿದ್ದಾರೆ.
‘ನೇಪಾಳದಲ್ಲಿ ಪಿಯುಸಿವರೆಗೂ ಓದಿರುವ ರಾಕೇಶ್, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿಯು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದ ‘ಕೆಲಸ ಖಾಲಿ ಇದೆ’ ಜಾಹೀರಾತು ನೋಡಿ ಆತನನ್ನು ಸಂಪರ್ಕಿಸಿದ್ದರು. ‘ಇಂಗ್ಲೆಂಡ್ನಲ್ಲಿ ಕೆಲಸ ಖಾಲಿ ಇದೆ. ₹ 2.30 ಲಕ್ಷ ಹಣ ಹಾಗೂ ಪಾಸ್ಪೋರ್ಟ್ ಸಮೇತ ಬೆಂಗಳೂರಿಗೆ ಬನ್ನಿ’ ಎಂದು ಆರೋಪಿ ಹೇಳಿದ್ದ’ ಎಂದು ಪೊಲೀಸರು ತಿಳಿಸಿದರು.
‘ಜುಲೈ 16ರಂದು ಬೆಂಗಳೂರಿಗೆ ಬಂದಿದ್ದ ರಾಕೇಶ್ ಅವರನ್ನು ಆರೋಪಿಗಳು ಚಿಕ್ಕಜಾಲದ ಹೋಟೆಲೊಂದಕ್ಕೆ ಕರೆದೊಯ್ದು, ಅಲ್ಲಿಯೇ ಕೊಠಡಿಯಲ್ಲಿರುವಂತೆ ಹೇಳಿದ್ದರು. ಬೆಳಿಗ್ಗೆ ತಿಂಡಿಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ರಾಕೇಶ್ಗೆ ತಿನ್ನಿಸಿದ್ದರು. ಬಳಿಕ ಅವರು ಪ್ರಜ್ಞೆ ತಪ್ಪಿದ್ದರು. ಬಳಿಕ ಆರೋಪಿಗಳು ಹಣದ ಸಮೇತ ಪರಾರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಹೋಟೆಲ್ ಸಿಬ್ಬಂದಿಯೇ ರಾಕೇಶ್ ಅವರನ್ನು ಎನ್.ಆರ್.ವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.