ADVERTISEMENT

ಫೇಸ್‌ಲೆಸ್‌, ಸಂಪರ್ಕರಹಿತ, ಆನ್‌ಲೈನ್‌ ಇ–ಖಾತಾ

ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸಲು, ಭ್ರಷ್ಟಾಚಾರ ನಿಯಂತ್ರಣಕ್ಕೆ ವ್ಯವಸ್ಥೆ: ಮುನೀಶ್‌ ಮೌದ್ಗಿಲ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 14:39 IST
Last Updated 10 ನವೆಂಬರ್ 2025, 14:39 IST
   

ಬೆಂಗಳೂರು: ಪಾಲಿಕೆಗಳ ಅಧಿಕಾರಿಗಳನ್ನು ಭೇಟಿ ಮಾಡದೆ, ‘ಫೇಸ್‌ಲೆಸ್‌, ಸಂಪರ್ಕರಹಿತ, ಆನ್‌ಲೈನ್‌ ಇ–ಖಾತಾ’ ಪಡೆಯುವ ವ್ಯವಸ್ಥೆಯನ್ನು ಜಿಬಿಎ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

‘ಅಂತಿಮ ಇ-ಖಾತಾ ಅಥವಾ ಹೊಸ ಖಾತಾವನ್ನು ಅನುಮೋದಿಸಲು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಅಥವಾ ವಿಷಯ ನಿರ್ವಾಹಕರು ಆಸ್ತಿ ದಾಖಲೆಗಳನ್ನು ಮಾತ್ರ ನೋಡಬೇಕಾಗುತ್ತದೆ. ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ನಾಗರಿಕರು ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ. ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ತಪ್ಪುತ್ತದೆ, ಭ್ರಷ್ಟಾಚಾರ ಇಲ್ಲದಂತಾಗುತ್ತದೆ’ ಎಂದು ಹೇಳಿದರು.

‘ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯು ನಾಗರಿಕರು ಸಲ್ಲಿಸಿದ ಅರ್ಜಿಯನ್ನು ಉಪ ವಿಭಾಗದ ಹೊರಗಿನ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತದೆ. ಅರ್ಜಿಗಳನ್ನು ಎಲ್ಲ ಅಧಿಕಾರಿಗಳಿಗೆ ಸಮಾನವಾಗಿ ವಿತರಿಸಲಾಗುತ್ತದೆ. ಇದರಿಂದಾಗಿ ನಗರ ಪಾಲಿಕೆಯೊಳಗೆ ಎಲ್ಲರಿಗೂ ಕೆಲಸದ ಹೊರೆ ಸಮಾನವಾಗಿ ಹಂಚಿಕೆಯಾಗುತ್ತದೆ. ಮಧ್ಯವರ್ತಿಗಳು ಇ-ಖಾತಾ ಕೊಡಿಸುವುದಾಗಿ ನಾಗರಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದರು. ಅದೂ ಈ ಹೊಸ ವ್ಯವಸ್ಥೆಯಿಂದ ನಿಂತುಹೋಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಹಳೆಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಖಾತಾ ಪಡೆಯಲು ಮತ್ತು ವರ್ಗಾವಣೆಗೆ ಎಆರ್‌ಒ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ದಾಖಲೆಗಳನ್ನು ಭೌತಿಕವಾಗಿ ಸ್ಥಳೀಯವಾಗಿ ಪರಿಶೀಲಿಸಲಾಗುತ್ತಿತ್ತು. ಮಧ್ಯವರ್ತಿಗಳು ನಾಗರಿಕರಿಂದ ಹಣವನ್ನು ಸಂಗ್ರಹಿಸಿ ಅಧಿಕಾರಿಗಳನ್ನು ಪ್ರಭಾವಿಸುತ್ತಿದ್ದರು. ಭ್ರಷ್ಟಾಚಾರವು ತುಂಬಾ ಹೆಚ್ಚಾಗಿತ್ತು. ನಾಗರಿಕರು ಸಂಪೂರ್ಣವಾಗಿ ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ಮೇಲೆ ಅವಲಂಬಿತರಾಗಿದ್ದರು. ಈಗ ಇದ್ಯಾವುದಕ್ಕೂ ಅವಕಾಶ ಇಲ್ಲ’ ಎಂದು ಹೇಳಿದರು.

‘ಇ-ಖಾತಾ ವ್ಯವಸ್ಥೆಯು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಇ-ಗವರ್ನೆನ್ಸ್ ಪ್ರಶಸ್ತಿ (ಚಿನ್ನ)– 2025 ಅನ್ನು ಗೆದ್ದಿದೆ. ಇ–ಖಾತಾ ಆನ್‌ಲೈನ್‌ ವ್ಯವಸ್ಥೆಯು ಕಾವೇರಿ ಮತ್ತು ಸ್ವಯಂಚಾಲಿತ ತಿದ್ದುಪಡಿಗಳೊಂದಿಗೆ ಏಕೀಕರಣ ಹೊಂದಿದೆ. ಇ-ಖಾತಾದಲ್ಲಾಗುವ ಬದಲಾವಣೆಗಳ ಪ್ರಕಾರ ಆಸ್ತಿ ತೆರಿಗೆ ದಾಖಲೆಗಳು ಮತ್ತು ಬೆಸ್ಕಾಂ ಮಾಲೀಕತ್ವದಲ್ಲಿ ಸ್ವಯಂಚಾಲಿತ ಬದಲಾವಣೆಗಳಾಗುತ್ತವೆ. ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ ಮತ್ತು ಏಜೆಂಟರು ಅಥವಾ ಮಧ್ಯವರ್ತಿಗಳಿಂದ ನಡೆಯುವ ಶೋಷಣೆಯನ್ನು ತಡೆಯುತ್ತದೆ. ಅಧಿಕಾರಿ-ಮಧ್ಯವರ್ತಿಗಳ ಒಪ್ಪಂದವನ್ನೂ ಮುರಿಯುತ್ತದೆ’ ಎಂದು ಮುನೀಶ್‌ ಮೌದ್ಗಿಲ್ ವಿವರಿಸಿದರು.

ಅಂತಿಮ ಇ-ಖಾತಾ ಅರ್ಜಿಯನ್ನು ಏಳು ದಿನಗಳಲ್ಲಿ ಮತ್ತು ಹೊಸ ಖಾತಾ ಸಂದರ್ಭದಲ್ಲಿ 60 ದಿನಗಳಲ್ಲಿ (ಹೊಸ ಖಾತಾಗೆ ಕ್ಷೇತ್ರ ಭೇಟಿ ಮತ್ತು ಪರಿಶೀಲನೆ ಅಗತ್ಯವಿರುವುದರಿಂದ) ವಿಲೇವಾರಿ ಮಾಡುವುದು ಜಿಬಿಎ ಮತ್ತು ನಗರ ಪಾಲಿಕೆಗಳ ಬದ್ಧತೆಯಾಗಿದೆ. ಖಾತಾ ಬದಲಾವಣೆಗಳು, ತಿದ್ದುಪಡಿಗಳು ಅಥವಾ ವಿಚಾರಣೆಯ ಅಗತ್ಯವಿರುವ ವಿವಾದದ ಅಂತಿಮ ಇ-ಖಾತಾ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.