ADVERTISEMENT

ನಕಲಿ ಛಾಪಾ ಕಾಗದ; ಎಫ್‌ಐಆರ್ ದಾಖಲು

‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ದೂರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:07 IST
Last Updated 9 ಜನವರಿ 2021, 16:07 IST

ಬೆಂಗಳೂರು: ಯಲಹಂಕ, ಶಿವಾಜಿನಗರ, ಕೆಂಗೇರಿ ಉಪನೋಂದಣಾಧಿಕಾರಿ ಕಚೇರಿ ಸೀಲ್ ಹಾಗೂ ಸಹಿ ಬಳಸಿ ನಕಲಿ ಛಾಪಾ ಕಾಗದ ಸೃಷ್ಟಿಸಿರುವ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಉಬ್ಬಚ್ಚು ಯಂತ್ರ (ಫ್ರಾಂಕಿಂಗ್), ಉಪನೋಂದಣಾಧಿಕಾರಿ ಕಚೇರಿಗಳ ಮುದ್ರೆ ಹಾಗೂ ಸಹಿ ಬಳಸಿಕೊಂಡು ನಕಲಿ ಛಾಪಾ ಕಾಗದ ಸೃಷ್ಟಿಸಿದ್ದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡಿತ್ತು. ಅದನ್ನು ಉಲ್ಲೇಖಿಸಿ ಗಾಂಧಿನಗರ ಉಪನೋಂದಣಾಧಿಕಾರಿ ಕೃಷ್ಣ ನಾಯಕ್ ಅವರು ದೂರು ನೀಡಿದ್ದಾರೆ.

‘ಕೃಷ್ಣ ನಾಯಕ್ ಅವರು ಜ . 4ರಂದು ದೂರು ನೀಡಿದ್ದಾರೆ. ಅದರನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ನಕಲಿ ಛಾಪಾ ಕಾಗದ ಹಾಗೂ ಇತರೆ ದಾಖಲೆಗಳನ್ನು ನೀಡುವಂತೆ ದೂರುದಾರರಿಗೆ ಹೇಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಐಜಿಆರ್‌ ಸೂಚನೆಯಂತೆ ತನಿಖೆ

‘ಗಾಂಧಿನಗರ ಉಪನೋಂದಣಾಧಿಕಾರಿ ಕಚೇರಿಯ ಪಿ.ಬಿ.ನಂ 6924 ಸಂಖ್ಯೆಯನ್ನು ಬಳಸಿ ನಕಲಿ ಛಾಪಾ ಕಾಗದ ಸೃಷ್ಟಿಸಲಾಗಿತ್ತು. ಈ ಬಗ್ಗೆ ಎಂ. ಮಂಜುಳಾ ಎಂಬುವರು ನೋಂದಣಿ ಮಹಾನಿರೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ (ಐಜಿಆರ್) ದೂರು ನೀಡಿದ್ದರು. ಗಂಭೀರವಾಗಿ ಪರಿಗಣಿಸಿದ್ದ ಐಜಿಆರ್‌, ತನಿಖೆ ನಡೆಸುವಂತೆ ಗಾಂಧಿನಗರ ಉಪನೋಂದಣಾಧಿಕಾರಿಗೆ ಸೂಚನೆ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತನಿಖೆ ನಡೆಸಿದ್ದ ಉಪನೋಂದಣಾಧಿಕಾರಿ, ನಕಲಿ ಛಾಪಾ ಕಾಗದ ಸೃಷ್ಟಿಯಾಗಿದ್ದನ್ನು ಪತ್ತೆ ಮಾಡಿದ್ದಾರೆ. ಅದರ ತನಿಖಾ ವರದಿ ಸಮೇತವೇ ದೂರು ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.