ಬೆಂಗಳೂರು: ಯುವತಿಯೊಬ್ಬರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿಕೊಂಡು ತನಿಖಾಧಿಕಾರಿಗೆ ತಿಳಿಯದಂತೆ ಕಾನೂನುಬಾಹಿರವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಆರೋಪದಡಿ ಹೆಡ್ ಕಾನ್ಸ್ಟೆಬಲ್ ಯದುಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
‘ರಾಜರಾಜೇಶ್ವರಿನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಯದುಕುಮಾರ್ ವಿರುದ್ಧದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಕೆಂಗೇರಿ ಗೇಟ್ ಠಾಣೆಯ ಎಸಿಪಿ ಅವರು ವರದಿ ಸಿದ್ಧಪಡಿಸಿದ್ದರು. ಇದೇ ವರದಿ ಆಧರಿಸಿ ಯದುಕುಮಾರ್ ಅವರನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಅವರು ಆದೇಶ ಹೊರಡಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಜೈಲಿನಿಂದ ಬಂದು ದೂರು ನೀಡಿದ್ದ ಯುವಕ: ‘ಕಂಪನಿಯಲ್ಲಿ ಸಹೋದ್ಯೋಗಿ ಆಗಿದ್ದ ಯುವತಿಯ ಜೊತೆಗಿನ ಖಾಸಗಿ ಕ್ಷಣಗಳ ಫೋಟೊ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ 24 ವರ್ಷದ ಯುವಕನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದರು. ಕೆಲ ದಿನ ಜೈಲಿನಲ್ಲಿದ್ದ ಯುವಕ, ಜಾಮೀನಿನ ಮೇಲೆ ಹೊರಗೆ ಬಂದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಅದೇ ಯುವಕ, ಹೆಡ್ ಕಾನ್ಸ್ಟೆಬಲ್ ಯದುಕುಮಾರ್ ಅವರಿಗೆ ವಿಷಯ ತಿಳಿಸಿದ್ದ. ಯುವತಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಹೇಳಿದ್ದ. ಯುವತಿ ವಿರುದ್ಧ ದೂರು ನೀಡಿದರೆ ತಾನೇ ಎಫ್ಐಆರ್ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಯದುಕುಮಾರ್ ತಿಳಿಸಿದ್ದ’ ಎಂದು ಹೇಳಿವೆ.
‘ಠಾಣೆಯ ತನಿಖಾಧಿಕಾರಿಗಳ ಸಹಾಯಕನಾಗಿದ್ದ ಯದುಕುಮಾರ್ ಮಾತಿನಂತೆ ಯುವಕ ದೂರು ನೀಡಿದ್ದ. ಎಫ್ಐಆರ್ ಸಹ ದಾಖಲಾಗಿತ್ತು. ಯುವತಿಗೆ ಯಾವುದೇ ನೋಟಿಸ್ ನೀಡದೇ, ಕೇವಲ 35 ದಿನಗಳಲ್ಲಿ ಯದುಕುಮಾರ್ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದ. ತನಿಖಾಧಿಕಾರಿಗೂ ಯಾವುದೇ ಮಾಹಿತಿ ತಿಳಿಸಿರಲಿಲ್ಲ. ತನಿಖಾಧಿಕಾರಿಯವರ ವೈಯಕ್ತಿಕ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ದುರುಪಯೋಗಪಡಿಸಿಕೊಂಡು, ಪೊಲೀಸ್ ತಂತ್ರಾಂಶ ವ್ಯವಸ್ಥೆಯಲ್ಲಿ ದೋಷಾರೋಪ ಪಟ್ಟಿ ಅಪ್ಲೋಡ್ ಮಾಡಿದ್ದ’ ಎಂದು ಮೂಲಗಳು ತಿಳಿಸಿವೆ.
‘ಪ್ರಕರಣದ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ ಯುವತಿಗೆ ನೋಟಿಸ್ ನೀಡಿತ್ತು. ಪ್ರಕರಣದ ಬಗ್ಗೆ ಪೊಲೀಸರು ತಮಗೆ ಯಾವುದೇ ಮಾಹಿತಿ ನೀಡಿಲ್ಲವೆಂದು ದೂರಿದ್ದ ಯುವತಿ, ಎಸಿಪಿ ಅವರಿಗೆ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡಾಗಲೇ ಯದುಕುಮಾರ್ ಕೃತ್ಯ ಪತ್ತೆಯಾಗಿದೆ’ ಎಂದು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.